ಶನಿವಾರ, ಡಿಸೆಂಬರ್ 22, 2012


ಎಲೆ ಮರೆ ಕಾಯಿ ೬೮
ಕೆಲವು ಹಿರಿಯರ ಮುಂದೆ ಯಾಕೋ ಮೌನ ವಹಿಸಬೇಕು ಎನಿಸುತ್ತೆ. ಯಾಕೆಂದರೆ ಅವರ ಜೀವನದ ಅನುಭವಗಳ ಎದುರು ನಾವು ತುಂಬಾ ತುಂಬಾ ಚಿಕ್ಕವರು. ಅಂತಹ ಜೀವನದ ಅನುಭವವುಳ್ಳ ಹಿರಿಯರು ಮಾತನಾಡುವಾಗ ಅವರು ಮಾತುಗಳನ್ನು ಶ್ರದ್ಧೆಯಿಂದ ಕೇಳಬೇಕು ಎನಿಸುತ್ತದೆಯೇ ಹೊರತು ಮಧ್ಯೆ ಮಾತನಾಡಬೇಕು ಎನಿಸುವುದಿಲ್ಲ. ಈ ದಿನ ಎಲೆ ಮರೆ ಕಾಯಿಗೆ ಅತಿಥಿಯಾಗಿ ಬಂದಿರುವ ಹಿರಿಯರ ಮಾತುಗಳನ್ನು ಕೇಳಿದಾಗ ನಾನು ಮೌನಕ್ಕೆ ಶರಣಾದೆ. ಅವರ ಮಾತುಗಳನ್ನು ಕೇಳಿ ನನ್ನ ಹಾಗೆ ಮೌನಕ್ಕೆ ಶರಣಾಗುವ ಸರದಿ ನಿಮ್ಮದೂ ಸಹ ಆಗಲಿ.. ಇವತ್ತಿನ ಎಲೆ ಮರೆ ಕಾಯಿ ಅಂಕಣಕ್ಕೆ ವಿಶೇಷ ಅತಿಥಿಯಾಗಿ ಬಂದಿರುವ ಹಿರಿಯರಾದ ಪಾರ್ಥಸಾರಥಿ ಸರ್ ಅವರ ಜೊತೆ ನಡೆಸಿದ ಮಾತುಕತೆಯ ತುಣುಕುಗಳು ಇಗೋ ನಿಮಗಾಗಿ...

ಪಾರ್ಥಸಾರಥಿ ನರಸಿಂಗರಾವ್

-ಪ್ರಿಯ ನಟರಾಜುರವರೆ
’ಎಲೆ ಮರೆಕಾಯಿಗಳ ಜೊತೆ ಮಾತುಕತೆ ಅಂಕಣಕ್ಕಾಗಿ ನಿಮ್ಮ ಕಿರು ಪರಿಚಯವೊಂದನು ದಯಮಾಡಿ ಮೆಸೇಜ್ ಮಾಡಿ.” ಎಂಬ ನಿಮ್ಮ ಕೋರಿಕೆ ನನಗೆ ಸ್ವಲ್ಪ ಗೊಂದಲ ಮೂಡಿಸಿತು. ಯಾರ ಕಣ್ಣಿಗೂ ಬೀಳದಂತೆ ಇದ್ದು ಸಮಾಜಕ್ಕೆ ಉಪಯೋಗಿಯಾಗಿರುವರನ್ನು ಎಲೆಮರೆ ಕಾಯಿ ಅನ್ನುವರೇನೊ. ನಾನು ಎಲ್ಲರಿಗೆ ಪರಿಚಯ ಮಾಡಿಕೊಡುವಂತ ದೊಡ್ಡ ಸಾಧನೆಯೇನು ಮಾಡಿಲ್ಲ ಎನ್ನುವ ಭಾವ ಒಮ್ಮೆ, ’ನನಗೆ ಅದೆಲ್ಲ ಇಷ್ಟವಿಲ್ಲ’ ಎಂದು ಹೇಳಿದರೆ ಅಹಂಕಾರವಾಗುವದೇನೊ ಎಂಬ ಭಾವ ಮತ್ತೊಮ್ಮೆ , ಈ ದ್ವಂದ್ವದಲ್ಲಿಯೆ ನಿಮ್ಮ ಆತ್ಮೀಯ ಕೋರಿಕೆ ಸ್ವೀಕರಿಸಿದೆ.

ಕತೆ ಕವನ ಕಾದಂಬರಿ ಇವೆಲ್ಲ ಚಿಕ್ಕ ವಯಸ್ಸಿನಲ್ಲಿಂದಲೆ ಪ್ರಾರಂಬವಾದ ಹುಚ್ಚು. ಚಂದಮಾಮದ ’ಭೇತಾಳ’ ವಾಗಲಿ ಸುಧಾ ಪತ್ರಿಕೆಯ ’ಡಾಬು’ ವಾಗಲಿ ನನಗೆ ಅಚ್ಚುಮೆಚ್ಚೆ ಆಗಿತ್ತು. ಏನನ್ನು ಓದಬೇಕೆಂಬ ಕಲ್ಪನೆ ಇಲ್ಲದೆ ಸಿಕ್ಕಿದ್ದನೆಲ್ಲ ಓದುತ್ತಿದ್ದ ನನ್ನ ಓದನ್ನು ಸರಿ ದಾರಿಗೆ ತಿರುಗಿಸಿದವರು ನಮ್ಮ ತಂದೆಯೆ. ಒಮ್ಮೆ ಜಿಂದೆನಂಜುಂಡಸ್ವಾಮಿಯವರ ’ಜಂಟಿ ಪ್ರೇಯಸಿ’ ಪುಸ್ತಕವನ್ನು ಓದುತ್ತಿದ್ದಾಗ ಇಣುಕಿ ನೋಡಿದವರು, ’ನಿನಗೆ ಓದಲೆ ಬೇಕೆಂಬ ಆಸಕ್ತಿ ಇದ್ದಲ್ಲಿ ಸಾಕಷ್ಟು ಇದೆ ಓದು ’ ಎಂದು ಹಲವು ವಿಷಯ ತಿಳಿಸಿ, ಅವರು ’ಮೂಕಜ್ಜಿಯ ಕನಸು’ ಪುಸ್ತಕ ತಂದು ಕೊಟ್ಟಾಗ ನಾನಿನ್ನು ಏಳನೆ ತರಗತಿ. ಆಗ ಪ್ರಾರಂಬವಾದ ಓದು ಕನ್ನಡದ ಬಹುತೇಕ ಎಲ್ಲ ಸಾಹಿತಿಗಳ ಬರಹಗಳನ್ನು ಓದುವಂತೆ ಮಾಡಿತು. ಬೈರಪ್ಪ, ಕಾರಂತ, ಎಂ.ಕೆ. ಇಂದಿರ, ತರಾಸು, ಅನಾಕೃ, ಬೀಚಿ, ಟಿ.ಕೆ.ರಾಮರಾವ್ ಎಲ್ಲರು ನನ್ನ ಸುತ್ತಲು ಸುತ್ತುತ್ತಿದ್ದರು. ಕಡೆಗೆ ಅಂಗಡಿಯಲ್ಲಿ ಕಡ್ಲೆಕಾಯಿ ಕಟ್ಟಿಕೊಟ್ಟರೆ , ತಿನ್ನುತ್ತ ಕಡ್ಲೆಕಾಯಿ ಕಟ್ಟಿದ್ದ ಆ ಪೇಪರಿನ ತುಂಡಿನಲ್ಲಿ ಏನಿದೆ ಎಂದು ಓದುವ ಅಕ್ಷರದಾಹ.....ಹಹ್ಹಹ್ಹ,,

ಹುಟ್ಟಿದ್ದು ತುಮಕೂರು ಜಿಲ್ಲೆಯಾದರು, ತಂದೆಯವರು ಉಪಾದ್ಯಾಯ ವೃತ್ತಿಯಲ್ಲಿದ್ದು ತುಮಕೂರು, ಹಾಸನ, ಚಿಕ್ಕಮಂಗಳೂರು,ಬೆಂಗಳೂರಿನ ಜಿಲ್ಲೆಯ ಹಲವು ಸ್ಥಳ ಸುತ್ತುವಂತಾಗಿತ್ತು. ಹಾಗಾಗಿ ನನಗೆ ಕರ್ನಾಟಕದ ಯಾವುದೆ ಸ್ಥಳವು ಪ್ರಿಯವೆ. ಕೆಲಸಕ್ಕೆ ಸೇರಿ ಕನಕಪುರದಲ್ಲಿ ಎಂಟು ವರ್ಷ ಕಳೆದು, ಬೆಂಗಳೂರಿನಲ್ಲಿ ನೆಲೆಸಿರುವೆ. ಪತ್ನಿ ಹಾಗು ಒಬ್ಬಳು ಮಗಳು ಇರುವ ಪುಟ್ಟ ಸಂಸಾರ.
ಸಾಹಿತ್ಯದ ಪ್ರಾಕಾರದಲ್ಲಿ ಏನನ್ನಾದರು ಬರೆಯಬಲ್ಲೆ ಎಂದು ಯಾವ ಕನಸು ಕಂಡಿರಲಿಲ್ಲ. ಎರಡು ವರ್ಷದ ಕೆಳಗೆ ತಮ್ಮನ ಮಗಳು ದೆವ್ವದ ಕತೆ ಹೇಳಿ ಎಂದು ದುಂಬಾಲು ಬಿದ್ದಾಗ, ಸುಮ್ಮನೆ ಅಂತರ್ಜಾಲದಲ್ಲಿ ಹುಡುಕಿದೆ. ಆಗ ಕಣ್ಣಿಗೆ ಬಿದ್ದಿದ್ದು ’ಸಂಪದ’ ತಾಣ. ಅಲ್ಲಿಯವರೆಗು ಅಂತರ್ಜಾಲದಲ್ಲಿ ಕನ್ನಡ ಅಕ್ಷರವಿರಬಹುದು ಎಂಬ ಕಲ್ಪನೆಯು ಇರದಿದ್ದ ನನಗೆ ಸಂತಸವೆನಿಸಿ, ಅಲ್ಲಿ ಏನಾದರು ಬರೆಯುವ ಕುತೂಹಲ ಮೂಡಿತು. ಹಾಗೆ ಸಾಹಿತ್ಯ ಕ್ಷೇತ್ರದಲ್ಲಿ ಸೇವೆಯಲ್ಲಿ ತೊಡಗಿ ಕೊಂಡಿರುವ ಹಲವು ಸಹೃದಯಿಗಳ ಪರಿಚಯವಾಯಿತು. ’ಸಂಪದದಲ್ಲಿ’ ಸುಮ್ಮನೆ ಬರೆಯುತ್ತ ಹೋದೆ,

ನಾನು ಬರೆದುದ್ದನ್ನೆಲ್ಲ ಓದಿ ಬೆನ್ನು ತಟ್ಟಲು ಹಲವರಿದ್ದರು. ತಪ್ಪು ತಿದ್ದಿದವರು ಇದ್ದರು. ಸಣ್ಣಕತೆಗಳ ರಚನೆಯಲ್ಲಿ ಹೆಚ್ಚು ಆಸಕ್ತಿ . ಅಂತರ್ಜಾಲದಲ್ಲಿ ಕನ್ನಡ ಸಾಹಿತ್ಯಸೇವೆ ನಡೆಸುತ್ತಿರುವ ಹತ್ತು ಹಲವು ಗೆಳೆಯರ ನಡುವೆ ನಾನೊಬ್ಬ , ಇನ್ನು ತಪ್ಪು ಹೆಜ್ಜೆ ಇಡುತ್ತಿರುವ ’ಶಿಶು’ ಎಂದೆ ನನ್ನ ಭಾವನೆ. ಸಾಹಿತ್ಯ ಸೇವೆ , ಕನ್ನಡಸೇವೆ ಅನ್ನುವದೆಲ್ಲ ದೊಡ್ಡ ಪದಗಳು, ನನ್ನೊಳಗಿನ ಏನನ್ನೊ ತೃಪ್ತಿಪಡಿಸಲು, ನನ್ನೊಳಗೆ ಹುಟ್ಟುವ ಭಾವನೆಗಳನ್ನು ಹೊರಹಾಕಲು ಇದೊಂದು ಮಾರ್ಗವಷ್ಟೆ.

ನನ್ನದೊಂದು ‘ಕರಿಗಿರಿ’ ಎಂಬ ಅಂತರ್ಜಾಲಪುಟವಿದೆ , ಸಣ್ಣಕತೆಗಳಿಗಷ್ಟೆ ಹೆಚ್ಚು ಒತ್ತುಕೊಟ್ಟಿರುವ ಪುಟವದು , ಆಸಕ್ತಿ ಇರುವವರು ಬೇಟಿಕೊಡಬಹುದು www.narvangala.blogspot.in

ನಾನು ಬರೆದ ಕವನಗಳಲ್ಲಿ ನನಗೆ ಅಚ್ಚುಮೆಚ್ಚು :ಮನೆ ಎಂದರೆ ಅದು ಬರಿ ಮನೆಯಲ್ಲ (೨೦೧೧) , ತರಕಾರಿ ಹುಡುಗಿ ಮತ್ತು ನಾನು (೨೦೧೨) ನನ್ನ ಬಾಲ್ಯದ ಗೆಳತಿ (೨೦೧೧)
ಹಾಗೆ ಕತೆಗಳಲ್ಲಿ ನಾನು ಇಷ್ಟಪಟ್ಟಿದ್ದು ವಿಕ್ಷಿಪ್ತ(೨೦೧೦) ಪ್ರಮಥಿನಿ (೨೦೧೦) ಲೌಕಿಕ ಅಲೌಕಿಕ (೨೦೧೧) ದೂರತೀರದ ಕರೆ (೨೦೧೨)

ತಮ್ಮ ವಿನಯದ ಮಾತುಗಳಿಂದಲೆ, ನಮ್ಮೊಳಗೆ ಹಿರಿತನ ತುಂಬುವ ಮಾತಿನ ಜಾಣ ನಟರಾಜುರವರಿಗೆ, ಅಭಿನಂದಿಸುತ್ತ
ಎಲ್ಲ ಸಾಹಿತ್ಯ ಪ್ರೇಮಿಗಳಿಗು ವಂದನೆಗಳನ್ನು ಅರ್ಪಿಸಲು ಈ ಅವಕಾಶ ಬಳಸಿಕೊಳ್ಳುತ್ತ
ನಮಸ್ಕಾರಗಳೊಡನೆ
ಪಾರ್ಥಸಾರಥಿ"

ಎಂದು ಚಂದವಾಗಿ ಮಾತನಾಡಿದ ಹಿರಿಯರಾದ ಪಾರ್ಥಸಾರಥಿ ಸರ್ ಅವರ ಮಾತುಗಳು ನಿಮಗೆ ಇಷ್ಟವಾಯಿತು ಎಂದುಕೊಳ್ಳುವೆ.. ಅವರು ತಿಳಿಸಿದ ಅವರ "ಕರಿಗಿರಿ" ಬ್ಲಾಗಿಗೆ ಭೇಟಿ ನೀಡಿ ಅವರ ಬರಹಗಳನ್ನು ಓದಿ ಆಹ್ವಾದಿಸಿ..

ಪಾರ್ಥಸಾರಥಿ ಸರ್ ಅವರ ಬ್ಲಾಗಿನಿಂದ ಆಯ್ದ ಒಂದೆರಡು ಕವನಗಳ ತುಣುಕುಗಳನ್ನು ನಿಮಗಾಗಿ ನೀಡಿರುವೆ.. ಖುಷಿಯಿಂದ ಓದಿಕೊಳ್ಳಿ..

ಅಮ್ಮ  ಕೈಯ ತೋರಿ ಹೇಳಿದಳು
'ಅಲ್ಲಿ ಹೋಗಿ ತಾ'
ಎಡವುತ್ತ ನಡೆದು ಹೋದೆ
"ಏನು ಬೇಕು ಪುಟ್ಟಾ?"
ಕೇಳಿದಳು ಅವಳು
ತರಕಾರಿ ಮಾರುವವಳು
"ಕೊತ್ತಂಬರಿ ತೊಪ್ಪು" ತೊದಲಿತು ಬಾಯಿ
"ಅಯ್ಯೊ ನನ್ನ ಬಂಗಾರ"
ಉಲಿದಳು ಆಕೆ ಜೊತೆಗೆ ಒಂದು ಸೇಬು
'ತಿನ್ನು ಪುಟ್ಟು' ಎಂದು
*****

ಅಂದು ಸ್ವಾತಂತ್ರ್ಯವಿರಲಿಲ್ಲ ಬೇಕಾದ್ದು ತಿನ್ನಲು
ಆದರೆ
ಅಮ್ಮನ ಕೈಯ ತುತ್ತು ತಿನ್ನುವ ಸೌಭಾಗ್ಯವಿತ್ತು

ಅಂದು ಸ್ವಾತಂತ್ರ್ಯವಿರಲಿಲ್ಲ ಬೇಕಾದಲ್ಲಿ ಓಡಾಡಲು
ಆದರೆ
ಅಪ್ಪನ ಕೈ ಬೆರಳ ಹಿಡಿದು ನಡೆಯುವ ಸೌಲಭ್ಯವಿತ್ತು
*****

ಶುಭವಾಗಲಿ

ಮತ್ತೆ ಸಿಗೋಣ

ನಿಮ್ಮ ಪ್ರೀತಿಯ
ನಟರಾಜು :))

ಗುರುವಾರ, ಡಿಸೆಂಬರ್ 13, 2012


ಎಲೆ ಮರೆ ಕಾಯಿ ೬೭
ಬದುಕಿನ ಕಾಲಘಟ್ಟದಲ್ಲಿ ಒಂದಷ್ಟು ದಿನಗಳಿರುತ್ತವೆ. ಏನಾದರು ಸಾಧಿಸಲೇಬೇಕು ಎಂಬ ಹಂಬಲದಿಂದ ಕಷ್ಟಪಡುತ್ತಲೇ ಯಶಸ್ಸಿನತ್ತ ದೃಷ್ಟಿ ನೆಟ್ಟು ಧ್ಯಾನಿಸುವ ಕನಸು ಕಾಣುವ ದಿನಗಳವು. ಅಂತಹ ಧ್ಯಾನಕ್ಕೆ ಕುಳಿತವರು ತಾವು ಪಟ್ಟ ಕಷ್ಟವನ್ನು ತಮ್ಮ ಮಕ್ಕಳು ಪಡಬಾರದು ಎಂದುಕೊಳ್ಳುತ್ತಲೇ ತಮ್ಮ ಬದುಕನ್ನು ಚಂದವಾಗಿ ಕಟ್ಟುತ್ತಾರೆ ಎನ್ನುವುದಕ್ಕಿಂತ ತಮ್ಮ ಮಕ್ಕಳಿಗೆ ಭವಿಷ್ಯವೊಂದನ್ನು ಕಟ್ಟಿಕೊಡುತ್ತಾರೆ ಎನ್ನಬಹುದು. ಬಡತನದ ದಿನಗಳನ್ನು ಕಳೆದು ತನ್ನ ಆರ್ಥಿಕ ಮಟ್ಟವನ್ನು ಉತ್ತಮ ಸ್ಥಿತಿಗೆ ತಂದುಕೊಂಡಿರುವ ಪ್ರತಿಯೊಬ್ಬರ ಒಳಗೂ ತಾವೇ ಬರೆದಿಟ್ಟುಕೊಂಡ ಡೈರಿಗಳಂತೆ ಕಾಣುವ ಮನದ ಮಾತುಗಳು ಸಾವಿರವಿರುತ್ತವೆ. ಎಂದಾದರು ಅಂತಹವರನ್ನು ಮಾತಿಗೆ ಎಳೆದರೆ ತಾವು ಕಷ್ಟಪಟ್ಟು ಉತ್ತಮ ಸ್ಥಿತಿಗೆ ಬೆಳೆದು ಬಂದ ದಿನಗಳನ್ನು ಅವರು ನೆನೆಸಿಕೊಳ್ಳುವಾಗ ಅವರ ಬಗ್ಗೆ ನಮಗೆ ಹೆಮ್ಮೆ ಹಾಗು ಗೌರವ ಮೂಡಿಬಿಡುತ್ತದೆ. ಇವತ್ತು ಓದಿಗೆ ಸಿಕ್ಕಿದ ಚಿನ್ಮಯಧಾರೆ ಎಂಬ ಬ್ಲಾಗಿನ ಲೇಖನವೊಂದರಲ್ಲಿ ತನ್ನ ಕಷ್ಟದ ದಿನಗಳ ಬಗ್ಗೆ ಮಾತನಾಡಿಕೊಂಡಿರುವ ಗೆಳೆಯ ಚಿನ್ಮಯ್ ಅವರ ಮನದ ಈ ಕೆಳಗಿನ ಮಾತುಗಳು ತುಂಬಾ ಇಷ್ಟವಾದವು...

"ಸಂಜೆ ಅಪರೂಪಕ್ಕೊಮ್ಮೆ ಸುತ್ತಾಡಲು ಹೋಗುತ್ತಿದ್ದ ನಾವು ಎಲ್ಲರಂತೆ ಹೊರಗಡೆ ಏನಾದರು ತಿನ್ನೋಣ ಅಂದುಕೊಂಡಾಗಲೆಲ್ಲ ಕೂಡಿಸಿ, ಕಳೆದು, ಗುಣಿಸಿ, ಬಾಗಿಸಿ ಕೊನೆಗೆ ಚಹಾ ಕುಡಿಯೋಣ ಎಂಬ ಒಕ್ಕೊರಲಿನ ತಿರ್ಮಾಣಕ್ಕೆ ಬರುತಿದ್ದೆವು. ಒಂದು ರೂಪಾಯಿ ಬೆಲೆಯ ಎರಡು ಅರ್ಧ ಚಹಾವನ್ನು ಮೂರು ಜನ ಕುಡಿಯುತ್ತಿದ್ದೆವು ಅಂದರೆ, ಒಂದು ರೂಪಾಯಿ ಬೆಲೆಯ ಎರಡು ಅರ್ಧ ಚಹಾ ಮೂರು ಜನರ ಪಾಲು..!! ಜೇಬಿನಲ್ಲಿ ಒಂದೊಂದು ರೂಪಾಯಿಗೂ ಘನವಾದ ಬೆಲೆ ಸಂದಾಯವಾಗುವಂಥ ಸಮಯ ಅದು..!!"

ಗೆಳೆಯ ಚಿನ್ಮಯ್ ಅವರ ಚಹಾ ದಿನಗಳ ಕುರಿತ ಮೇಲಿನ ಸಾಲುಗಳನ್ನು ಓದುತ್ತಲೇ ನೆಪೋಲಿಯನ್ ಹಿಲ್ ರವರ "ನಮ್ಮಪ್ಪ ಶ್ರೀಮಂತನಾಗಲು ಬಯಸಿರಲಿಲ್ಲ ಆದ್ದರಿಂದ ನಾವು ಬಡವರಾಗಿದ್ದೆವು" ಎಂಬ ಸಾಲೊಂದು ನೆನಪಾಯಿತು. ನಮ್ಮಪ್ಪ ಬಡವನಾಗಿದ್ದ ನಾವು ಬಡವರಾಗಿ ಉಳಿಯಬಾರದು ಎಂಬ ಕಿಚ್ಚು ನಮ್ಮಲ್ಲಿ ಹುಟ್ಟಿದ ದಿನವಲ್ಲವೇ ನಾವು ಯಶಸ್ಸಿನತ್ತ ಪಯಣ ಬೆಳೆಸುವುದು. ಅಂತಹ ಯಶಸ್ಸಿನತ್ತ ಪಯಣ ಬೆಳೆಸಿದ ದಿನಗಳ ಕುರಿತು ಗೆಳೆಯ ಚಿನ್ಮಯ್ ತನ್ನ ಬ್ಲಾಗಿನಲ್ಲಿ ಬರೆದುಕೊಂಡಿರುವುದು ಖುಷಿಯ ವಿಚಾರ..

ನನ್ನ ಮುಗ್ಧ ಗೆಳತಿಗೆ          
ಹೇಳಿದೆ. ಪೆದ್ದು, ನಮ್ಮ
ಹೃದಯದಲಿ ನಾಲ್ಕು
ಕವಾಟುಗಳಿವೆಯೆಂದು
ನಸುನಗುತ ಕೇಳಿದಳಾಕೆ
ಒಂದರಲ್ಲಿ ನಾನು ಇನ್ನು
ಉಳಿದವುಗಳಲಿ ಯಾರಿಹರೆಂದು..

ಕವಿತೆ, ಚುಟುಕಗಳನ್ನು ಬರೆಯುವ ಕವಿ ಕಾಲಾಂತರದಲ್ಲಿ ಓದುಗರ ಓದುವ ರುಚಿಯನ್ನು ಅರ್ಥೈಸಿಕೊಂಡು ತನ್ನ ಕಾವ್ಯ ಕೃಷಿಯಲ್ಲಿ ಬದಲಾವಣೆಯನ್ನು ಹೇಗೆ ಕಂಡುಕೊಳ್ಳುತ್ತಾನೆ ಎನ್ನುವುದಕ್ಕೆ ಈ ಕವಿ ಗೆಳೆಯನ ಮೇಲಿನ ಸಾಲುಗಳು ಉತ್ತಮ ಉದಾಹರಣೆ.. ಚುಟುಕಗಳಲ್ಲೇ ತಮ್ಮನ್ನು ಗುರುತಿಸಿಕೊಳ್ಳಲು ತೊಡಗಿರುವ ಕವಿಗಳ ಸಂಖ್ಯೆ ದಿನ ದಿನಕ್ಕೆ ಅದರಲ್ಲೂ ಫೇಸ್ ಬುಕ್ ತಾಣದಲ್ಲಿ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಉಳಿದವರಿಗಿಂತ ವಿಭಿನ್ನವಾಗಿ ನಿಲ್ಲುವುದು ಕಷ್ಟದ ಕೆಲಸ.. ಆ ವಿಭಿನ್ನತೆ ನಮ್ಮ ಬರಹಗಳಲ್ಲಿ ಕಂಡ ದಿನ ಜನ ಮೆಚ್ಚುಗೆ ತಾನಾಗಿಯೇ ಸಿಕ್ಕಿಬಿಡುತ್ತದೆ ಎನ್ನಬಹುದು. ಗೆಳೆಯ ಚಿನ್ಮಯ್, ತಮ್ಮ ವೃತ್ತಿಯ ನಿಮಿತ್ತ ವಿವಿಧ ಜಾಗಗಳನ್ನು ಸುತ್ತಿ ಬಂದವರು. ಅವರು ಚುಟುಕ ಮತ್ತು ಕಾವ್ಯಗಳಲ್ಲೇ ಹೆಚ್ಚು ತೊಡಗಿಕೊಂಡಿದ್ದಾರ ಹೊರತು ತಮ್ಮ ಬದುಕಿನ ಅನುಭವಗಳ ದಾಖಲಿಸುವ ಪ್ರಯತ್ನ ಮಾಡಿಲ್ಲ. ತಮ್ಮ ಬದುಕಿನ ಅನುಭವಗಳನ್ನು ದಾಖಲಿಸಲು ತೊಡಗಿದರೆ ಅವರು ಉತ್ತರ ಕರ್ನಾಟಕ ಮತ್ತು ಉತ್ತರ ಭಾರತದ ಬದುಕನ್ನು ತಮ್ಮ ಬರಹಗಳಲ್ಲಿ ಕಟ್ಟಿಕೊಡಬಲ್ಲರು. ಇತ್ತೀಚೆಗಷ್ಟೇ ಗುಜರಾತ್ ನಿಂದ ಮತ್ತೆ ಕರ್ನಾಟಕಕ್ಕೆ ಬಂದಿರುವ ಅವರ ಬರಹಗಳಲ್ಲಿ ಗುಜರಾತ್ ಕುರಿತ ಅವರ ಅನುಭವ ಲೇಖನಗಳು ಹೊರ ಬರಲಿ ಎಂದು ಆಶಿಸುತ್ತಾ ಚಿನ್ಮಯ್ ರವರ ಕಿರು ಪರಿಚಯ ಎಲೆ ಮರೆ ಕಾಯಿಗಾಗಿ ಗೆಳೆಯರೇ ಇಗೋ ನಿಮ್ಮ ಮುಂದೆ..

[Image1075.jpg]
ಚಿನ್ಮಯ್ ಮಠಪತಿ

"ಮಾತೆ ಭುವನೇಶ್ವರಿ ಮತ್ತು ಸಹೃದಯಿ ಕನ್ನಡ ಕವಿ ಹೃದಯಗಳಿಗೆ ನಮಿಸುತ್ತಾ…
ಮೊದಲನೆಯದಾಗಿ ಕನ್ನಡ ಬ್ಲಾಗ್ ಮುಖಾಂತರ ಯುವ ಬರಹಗಾರರನ್ನು ನಾಡಿಗೆ “ಎಲೆ ಮರೆ ಕಾಯಿಗಳ ಜೊತೆ ಮಾತುಕತೆ” ಅಂಕಣದ ಮೂಲಕ ಪರಿಚಯಿಸುತ್ತಿರುವ ಸಹೃದಯಿ ಅಂಕಣಕಾರ ಮತ್ತು ಯುವ ಕವಿ ಮಿತ್ರರಾದ ನಟರಾಜು ಅವರಿಗೆ ನನ್ನ ತುಂಬು ಹೃದಯದ ಧನ್ಯವಾದಗಳು. ನಟರಾಜು ಅವರಿಂದ ನಿಮ್ಮ ಬ್ಲಾಗ್ ಮತ್ತ ನಿಮ್ಮ ಕುರಿತು “ಎಲೆ ಮರೆ ಕಾಯಿಗಳ ಜೊತೆ ಮಾತುಕತೆ” ಅಂಕಣದಲಿ ಪರಿಚಯಿಸಲು ಇಚ್ಚಿಸಿದ್ದೇನೆ ಆದ್ದರಿಂದ ನಿಮ್ಮ ಸ್ವ ಪರಿಚಯವನ್ನು ಕಳುಯಿಸಿ ಕೊಡಿ ಎಂದು ಸಂದೇಶ ಬಂದಾಗ, ಆ ಸಂದೇಶವನು ನೋಡಿ ನನಗೆ ಸಂತಸಕ್ಕಿಂತ ಅಶ್ಛರ್ಯವೇ ದ್ವಿಗುಣವಾಗಿ ಕಾಡಿತು. ಕಾರಣಗಳು ಸಾವಿರಾರು, ನನ್ನಂಥ ಪುಟ್ಟ ಬರಹಗಾರನಿಗೆ ಇಂತಹ ಮಾನ್ಯತೆ ನಿಜವಾಗಲೂ ದೊಡ್ಡದಾದ ಬಿರುದು ಬಹುಮಾನಕ್ಕಿಂತಲೂ ಮಿಗಿಲಾದದ್ದು. ಅವರ ಪ್ರೀತಿತುಂಬಿದ ಮನವಿಯನ್ನು ಸಂಕೋಚದಿಂದಲೆ ಒಪ್ಪಿಕೊಂಡು ನನ್ನ ಪರಿಚಯವನ್ನು ಹಂಚಿಕೊಳ್ಳುತ್ತಿದ್ದೇನೆ.

ನಾನು ಹುಟ್ಟಿದ್ದು ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ತಲ್ಲೂರು ಎಂಬ ಪುಟ್ಟ ಗ್ರಾಮದಲಿ. ತಂದೆ ಶ್ರೀ. ಸಿದ್ದಯ್ಯ ಮತ್ತು ತಾಯಿ ಶ್ರಿಮತಿ.ಗುರುಸಿದ್ದಮ್ಮ. ನನ್ನ ಹುಟ್ಟೂರೆಂದರೆ ನನಗೆ ಅತೀವ ಪ್ರೀತಿ ಮತ್ತು ಅಭಿಮಾನ ಕೂಡ. ಸುತ್ತಲೂ ನಾಲ್ಕು ಕಡೆಗಳಿಂದ ಹಸುರಿನ ಬೆಟ್ಟಗಳ ನಡುವೆ ತನ್ನ ಅಸ್ತಿತ್ವವನ್ನು ಕಂಡುಕೊಂಡಿರುವ ನನ್ನ ಹುಟ್ಟೂರಲಿ ದೇಸಾಯಿ ಒಡೆತನದ ಒಂದು ಸುಂದರ ಅರಮನೆ (ವಾಡೆ) ಇದೆ. ಆ ಕಾರಣಕ್ಕಾಗಿ ಕನ್ನಡದ ಹಲವಾರು ಚಲನ ಚಿತ್ರಗಳು ನನ್ನೂರಲ್ಲಿ ಚಿತ್ರಿಕರಣಗೊಂಡಿವೆ. ಕಾರಣಾಂತರಗಳಿಂದ ನಮ್ಮೂರಲ್ಲಿ ನಾನು ಇದುವರೆಗೂ ಜೀವನ ಕಳೆದದ್ದು ಕೇವಲ ಎರಡು ವರ್ಷ. ಧಾರವಾಡದಲ್ಲಿ ನನ್ನ ಸಹೋದರ ನೆಲೆಸಿರುವುದರಿಂದ ಸಧ್ಯಕ್ಕೆ ಸಾಹಿತ್ಯ ನಗರಿ ಧಾರವಾಡ ನನ್ನೂರಾಗಿ ಹೋಗಿದೆ. ಅಂದ ಹಾಗೆ ನಾನು ಓದಿದ್ದು ಎಂ.ಎಸ್.ಸಿ ನರ್ಸಿಂಗ್. ನನ್ನ ಓದು ಉದ್ಯೋಗ ಮತ್ತು ಸಾಹಿತ್ಯಾಸಕ್ತಿಗೂ ಎತ್ತಣ ಮಾಮರ ಎತ್ತಣ ಕೋಗಿಲೆ ಎಂದು ಕೊಂಡರು ತಪ್ಪಿಲ್ಲ.

ಮಾತೃ ಭಾಷೆ ಕನ್ನಡ ನನ್ನೆದೆಯಾಳಕ್ಕೆ ಇಳಿದು ನನ್ನ ಉಸಿರಾಗಿದ್ದು ನನ್ನ ಬಾಲ್ಯದ ದಿನಗಳಲಿ. ಮೂಲತಃ ಕನ್ನಡ ಮಾದ್ಯಮದಲಿ ಹತ್ತನೆಯ ತರಗತಿವರೆಗೆ ಓದಿದ ನಾನು, ಮಾಧ್ಯಮಿಕ ಶಾಲೆಯಲ್ಲಿರುವಾಗಲೇ ಕನ್ನಡದ ಸಾಹಿತ್ಯ ಪ್ರಕಾರಗಳನ್ನು ಓದುವ ಅಭಿರುಚಿಯನ್ನು ಬೆಳೆಸಿಕೊಂಡೆ. ಅದರಲ್ಲಿ ಪ್ರಥಮ ಭಾಷೆ ಕನ್ನಡ ವಿಷಯ ನನ್ನ ಅಚ್ಚು ಮೆಚ್ಚಿನ ವಿಷಯವಾಗಿತ್ತು. ನಾನು ಎಂಟನೆಯ ತರಗತಿಯಲ್ಲಿದ್ದಾಗ ಸಾಕ್ಷರತೆಯ ಬಗ್ಗೆ ಜಾಗೃತಿಯನ್ನು ಮೂಡಿಸುವಂತಹ ಒಂದು ಪುಟ್ಟ ನಾಟಕವನ್ನು ಬರೆದು ನನ್ನ ಸ್ನೇಹಿತರೊಡಗೂಡಿ ಹಳ್ಳಿಯಲಿ ನಾಟಕವಾಡಿದ್ದೆ. ತದನಂತರ ಜೀವನದ ಒಂದಿಷ್ಟು ಅಹಿತಕರ ತಿರುವುಗಳಲ್ಲಿ ನನ್ನ ಬದುಕಿನ ಮುಕ್ಕಾಲು ಭಾಗ ಸೆವೆಸಿದ ಕಾರಣ ಹೃದಯ ಗೂಡಲ್ಲಿ ಕನ್ನಡ ತಾಯಿನ ನುಡಿ ಸೇವೆಯ ವಾಂಛೆ ಸಂಘರ್ಷದ ಬದುಕಿನಲಿ ಕನಸಾಗಿಯೇ ಉಳಿದು ಹೋಗಿತ್ತು. ನನ್ನ ಎಂ.ಎಸ್.ಸಿ ಓದು ಮುಗಿದ ನಂತರ ಜೀವನಕೆ ಒಂದು ನೆಲೆ ಸಿಕ್ಕಿತು.ಇತ್ತೀಚಿನ ಆರೆಂಟು ತಿಂಗಳುಗಳಿಂದ ನನ್ನ “ಚಿನ್ಮಯಧಾರೆ”ಯಲಿ ನನ್ನ ಪುಟ್ಟ ಕಥೆ, ಕವನ, ಚುಟುಕುಗಳ ಮುಖಾಂತರ ಅಕ್ಷರ ಕಲಿಸಿಕೊಟ್ಟ ಕನ್ನಡಮ್ಮನ ಸೇವೆಯಲಿ ತೊಡಗಿದ್ದೇನೆ.

ಇನ್ನು ಕನ್ನಡ ಬ್ಲಾಗುಗಳೆಂದರೆ ಅವು ಆಧುನಿಕ ಸಾಹಿತ್ಯ ಲೋಕದ ಆವಿಷ್ಕಾರಗಳು. ಇದ್ದಲ್ಲಿಯೇ ಸಾಹಿತ್ಯಾಮೃತವನ್ನು ನೀಡುವ ಅಕ್ಷ(ರ)ಯ ಪಾತ್ರೆಗಳು.

ಕೊನೆಯದಾಗಿ ನನ್ನೆಲ್ಲ ಗೌರವಾನ್ವಿತ ಹಿರಿಯ ಬರಹಗಾರರಲ್ಲಿ ನನ್ನ ವಿನಮ್ರ ವಿನಂತಿ. ನಿಮ್ಮ ಅನುಭವಧಾರೆಯಿಂದ ನನ್ನಂತಹ ಯುವ ಬರಹಗಾರರನ್ನು ತಿದ್ದಿ ತೀಡಿ ಅವರನ್ನು ನಿಮ್ಮಂತೆಯೇ ಒಬ್ಬ ಪಕ್ವ ಬರಹಗಾರನನ್ನಾಗಿಸಿ. ನಾನು ಸಹ ನಿಮ್ಮ ಸಲಹೆ ಸೂಚನೆಗಳಿಗೆ ತಲೆಬಾಗಿ ಇನ್ನು ಒಂದಿಷ್ಟು ಸಮಾಜಮುಖಿ ಸಾಹಿತ್ಯವನ್ನು ಮಾತೃ ಭಾಷೆ ಕನ್ನಡಮ್ಮನ ಅಕ್ಷರ ರೂಪದಲ್ಲಿ ಓದು ಮುಕ್ಕಾಲಾಗಿಸಿಕೊಂಡು ಬರಹ ಒಕ್ಕಾಲಾಗಿಸಿಕೊಂಡು ಅಳಿಲು ಸೇವೆ ನೀಡುವೆ.ಶುಭಕಾಮನೆಗಳೊಂದಿಗೆ."

ಎಂದು ಚಂದದ ಮಾತನಾಡಿದ ಗೆಳೆಯ ಚಿನ್ಮಯ್ ರವರ ಕನ್ನಡ ಪ್ರೇಮಕ್ಕೆ ನಮನಗಳು..
ಸಹೃದಯಿ ಗೆಳೆಯರೇ, ಗೆಳೆಯ ಚಿನ್ಮಯ್ ರವರ ಮಾತುಗಳು ನಿಮಗೆ ಇಷ್ಟವಾಯಿತು ಎಂದುಕೊಳ್ಳುವೆ. ಅವರ ಬ್ಲಾಗಿನ ಲಿಂಕ್ ಈ ಕೆಳಗೆ ನೀಡಿರುವೆ. ಸಮಯವಿದ್ದಾಗ ಕಣ್ಣಾಡಿಸಿ..
http://chinmayadhare.blogspot.in/

ಚಿನ್ಮಯ್ ರವರ ಚಂದದ ಒಂದೆರಡು ಚುಟುಕಗಳು ಇಗೋ ನಿಮಗಾಗಿ.. ಖುಷಿಯಿಂದ ಓದಿಕೊಳ್ಳಿ..

ಪ್ರೀತಿಯ ಪರೀಕ್ಷೆಯಲಿ
ಇಬ್ಬರೂ ನಕಲು ಮಾಡಿಯೇ
ಉತ್ತೀರ್ಣರಾದೆವು…
ಈಗ ನಕಲು ಪ್ರೀತಿಯಿಂದ
ಜೀವನವೇ ನಕಲು ನಕಲು.
*****
ಅಳಿದು ಹೋಗುತ್ತಿರುವ
ಮನುಜ ಸಂಬಂಧಗಳ
ಮೂರ್ತಿಯ ಮಾಡಿ
ಗುಡಿಯ ಕಟ್ಟಬೇಕು,
ದೇವರೆಂಬ ಭಯದಿ
ಕಠೋರ ಹೃದಯಗಳು
ತಲೆಬಾಗಿ ನಮಿಸ ಬಹುದು..!!
*****

ಮತ್ತೆ ಸಿಗೋಣ
ನಿಮ್ಮ ಪ್ರೀತಿಯ
ನಟರಾಜು :))

ಗುರುವಾರ, ಡಿಸೆಂಬರ್ 6, 2012


ಎಲೆ ಮರೆ ಕಾಯಿ 
ವರ ಸಿಕ್ಕಿದ ಭ್ರಮೆಯಲ್ಲಿ 
ಜಗವ ಮರೆತವಳು 
ನಶೆಯ ಮತ್ತಲ್ಲಿ
ಹರೆಯದ ಕೊಳ ಈಜಿದವಳು 

ಅವನೋ ಕೊಡವಿಕೊಂಡು ಎದ್ದನು 
ಇವಳು ಎಡವಿ ಬಿದ್ದಳು 
ನಿಲ್ಲೆಂದರೆ ಅಂವ ಕೇಳ 
ಬಾರದಿರೆಂದರೆ ಬಸಿರು ಕೇಳ 

ಇಂತಹ ಕವಿತೆಯನ್ನು ಹೆಣ್ಣೊಬ್ಬಳಷ್ಟೇ ಚಂದವಾಗಿ ಕಟ್ಟಿಕೊಡಬಲ್ಲಳು. ಅವಿವಾಹಿತ ಹೆಣ್ಣನ್ನು ಬೆಡ್ ರೂಮಿನ ಹಾಸಿಗೆಯ ಮೇಲಷ್ಟೇ ಕಾಣುವ ಗಂಡಿಗೆ  ಅವಳ ಜೊತೆ ಸುಖಿಸಿ ಎದ್ದ ನಂತರದ ಪರಿಣಾಮಗಳ ಅರಿವು ಎಷ್ಟಿರುತ್ತದೋ ಏನೋ ತಿಳಿಯದು. ಅವಳ ಜೊತೆ ಸುಖಿಸುವ ಮುನ್ನ ಒಂದು ಕ್ಷಣ ಆಸ್ಪತ್ರೆಯ ಬೆಡ್ ಮೇಲೆ ಆ ಹೆಣ್ಣನ್ನು ಊಹಿಸಿಕೊಂಡರಷ್ಟೇ ಆ ಕ್ಷಣದ ಹೆಣ್ಣು ಗಂಡಿನ ನೋವು, ಹತಾಶೆ, ಅಸಹಾಯಕತನ, ಭಯವನ್ನು ಅವನು ಕಾಣಲು ಸಾಧ್ಯ. ಆ ಭಯ ಇಬ್ಬರಲ್ಲೂ ಮೂಡಿದ್ದೇ ಆದರೆ ಅಂತಹ ಸ್ಥಿತಿ ಬಾರದಿರಲಿ ಎಂದು ಕೆಲವರು ತಮ್ಮ ಆಸೆಗಳನ್ನು ನಿಗ್ರಹಿಸಿದರೆ ಮತ್ತೆ ಕೆಲವರು ಮುಂಜಾಗೃತ ಕ್ರಮಗಳನ್ನು ಅನುಸರಿಸಿ ಸುಖಿಸಿಬಿಡಬಹುದು ಅಥವಾ ಇನ್ನೂ ಕೆಲವರು ಯಾವ ಕ್ರಮಗಳನ್ನು ಅನುಸರಿಸದೆ ಅದೃಷ್ಟ ಕೈ ಕೊಟ್ಟರೆ ಸಮಸ್ಯೆಯಲ್ಲಿ ಸಿಲುಕಬಹುದು. ಮೇಲಿನ ಕವಿತೆಯ ಸಾಲುಗಳನ್ನು ಓದುತ್ತಲೇ ಹೆಣ್ಣಿನ ಒಳ ತುಮುಲ ಯಾಕೋ ಮನಸಿನ ಒಳಗೆ ಬಂದು ನಿಂತಂತಾಯಿತು. ಅದರ ಜೊತೆಗೆ ಹಿರಿಯ ಕವಿ ದೊಡ್ಡ ರಂಗೇ ಗೌಡರು ಬರೆದ "ಪ್ರೀತಿ ಪ್ರೇಮ ನಡೆಯೋ ವೇಳೆ ತಪ್ಪೋದಿಲ್ಲ ರಾಸಲೀಲೆ.. ಕದ್ದು ಮುಚ್ಚಿ ನಡೆಸೋ ವೇಳೆ ಮನಸ್ಸಿನಲ್ಲಿ ತೂಗುಯ್ಯಾಲೆ" ಎಂಬ ಸಾಲುಗಳೂ ಸಹ ನೆನಪಾದವು.

"ಸ್ವಲ್ಪ ದಿನದಿಂದ ಬಹಳನೇ ಬಾಬಜ್ಜನ ನೆನಪು....ಸಿಕ್ಕಾಪಟ್ಟೆ ಅನ್ನುವಷ್ಟು ಜಾಸ್ತಿಯಾಗಿತ್ತು...ಅಜ್ಜನ ಗುಳಿ ಬಿದ್ದ ಕೆನ್ನೆ ಹಿಂಡಿ, ಜೋಬಲ್ಲಿನ ಎಂಟಾಣೆ ರಸಗುಲ್ಲಕ್ಕೆ ಆಸೆಯಾಗಿತ್ತು....ಜಗಳ ಕಾದು ಸೋಲಿಸಬೇಕೆನಿಸಿತ್ತು... ಮುದ್ದಿನ ಅಜ್ಜನ ಬಳಿ ಆಟವಾಡಬೇಕೆನ್ನುವ ಹುಮ್ಮಸ್ಸು.. ಹಮ್ಮು ಬಿಮ್ಮಿಲ್ಲದ ಅಜ್ಜ ಎಂದರೆ ಅದೇನೋ ಅದಮ್ಯ ಅಕ್ಕರೆ.."

ಮೇಲಿನ ಚಂದದ ಸಾಲುಗಳ ಬರೆದ ಇಂತಹ ಲೇಖಕಿ ಸಹೋದರಿಯರ ಬರಹಗಳನ್ನು ಓದಿದಾಗ ಹೀಗೆ ಅನಿಸುತ್ತೆ. ನಾವು ಪ್ರಪಂಚವನ್ನು ಸುತ್ತುತ್ತೇವೆ ಆದರೆ ಅವರು ನಮ್ಮಷ್ಟು ಪ್ರಪಂಚ ಸುತ್ತುವುದಿಲ್ಲ. ಬದಲಿಗೆ ತಾವು ಇದ್ದಲ್ಲಿಯೇ ಪ್ರಪಂಚವೊಂದನ್ನು ಕಾಣುತ್ತಾರೆ ಇಲ್ಲ ಪ್ರಪಂಚವೊಂದನ್ನು ಕಟ್ಟುತ್ತಾರೆ. ಅವರು ಕಟ್ಟುವ ಪ್ರಪಂಚದಲ್ಲಿ ಅಜ್ಜಿ ತಾತ ಅಪ್ಪ ಅಮ್ಮ ಮನೆ ಮಕ್ಕಳು ಕೈದೋಟ ಅಡುಗೆ ಊಟ ಆಟೋಟ ಇಂತಹ ಪುಟ್ಟ ಪುಟ್ಟ ಸಂಗತಿಗಳಿಗೆ ಹೆಚ್ಚು ಪ್ರಾಶಸ್ತ್ಯವಿರುತ್ತದೆ. ಅದನ್ನು ಮೀರಿದ ಪ್ರಪಂಚವನ್ನು ಅವರು ಕಟ್ಟುವುದಾದರೆ ಅದು ತಾವಷ್ಟೇ ಬಿಡುವಿನ ವೇಳೆಯಲ್ಲಿ ವಿಹರಿಸಲು ಕಟ್ಟಿಕೊಳ್ಳುವ ಪ್ರಪಂಚ. ಅದು ಅವರ ಪಾಲಿಗೆ ತಮ್ಮನ್ನೋ ತಮ್ಮ ಮಕ್ಕಳನ್ನೋ ಕಿನ್ನರಿಯರಂತೆ ಊಹಿಸಿಕೊಂಡು ಖುಷಿಪಡುವ ಒಂದು ಕಲ್ಪನಾ ಲೋಕ. ಅಂತಹ ಖುಷಿಯ ಪ್ರಪಂಚವನ್ನು ನಮ್ಮ ಬರಹಗಳಲ್ಲಿ ನಾವೇಕೆ ಕಟ್ಟಿಕೊಡಲು ವಿಫಲರಾಗುತ್ತೇವೆ ಎಂದು ಪದೇ ಪದೇ ಅನಿಸುತ್ತದೆ. ತನ್ನ ಅಜ್ಜನ ಕುರಿತು ಪುಟ್ಟ ಮಗುವಿನಂತೆ ಈ ಸಹೋದರಿ ಬರೆದ ಸಾಲುಗಳ ನೋಡಿ ಯಾಕೋ ಹಾಗೆ ಅನಿಸಿತು.

ಇಬ್ಬರಿಗೂ ಗೊತ್ತಿತ್ತು
ಒಬ್ಬರಿಗೊಬ್ಬರು ದಕ್ಕುವುದಿಲ್ಲವೆಂದು
ಆದರೂ ಅದ್ಯಾವ ಮಾಯೆ ಆವರಿಸಿತ್ತು..?
ಗೊತ್ತಿದ್ದೂ ಮಾಡಿದ ತಪ್ಪಿಗೆ ಶಿಕ್ಷೆ ಇಷ್ಟು ಘೋರವಾಗಿರುತ್ತಾ?
ಅಷ್ಟಕ್ಕೂ ಅದು ತಪ್ಪಾ?
ಇಬ್ಬರೂ ಬೆನ್ನು ಮಾಡಿ ಹೊರಟಿದ್ದಾರೆ...
ಅವಳಿಗೆ ಅವನಿಲ್ಲ..
ಅವನಿಗೆ ಅವಳಿಲ್ಲ..
ಯಾತನೆ ಬಾಳೆಲ್ಲ.. :'(

ಹೀಗೆ ಅಧ್ಬುತವಾಗಿ ಬರೆಯುವ ನಿಜಕ್ಕೂ ಎಲೆ ಮರೆ ಕಾಯಿ ಎನ್ನಬಹುದಾದ ಪ್ರತಿಭೆ ಸುಷ್ಮಾ ಮೂಡುಬಿದಿರೆ. ಸಹೋದರಿ ಸುಷ್ಮಾ ಜೊತೆ ನಡೆಸಿದ ಮಾತುಕತೆಯ ತುಣುಕುಗಳು ಈ ವಾರದ ಎಲೆ ಮರೆ ಕಾಯಿಯಲ್ಲಿ ಸಹೃದಯಿಗಳೇ ಇಗೋ ನಿಮಗಾಗಿ..

ಸುಷ್ಮಾ ಮೂಡುಬಿದಿರೆ

"ಹೆಸರು ಸುಷ್ಮಾ ಮೂಡುಬಿದಿರೆ.. ಊರು ಜೈನಕಾಶಿ ಎಂದೇ ಪ್ರಖ್ಯಾತವಾದ ಮೂಡಬಿದಿರೆ.

ಹುಟ್ಟಿದ್ದು ಬೆಳೆದಿದ್ದು ಎಲ್ಲಾ ಊರಲ್ಲೇ... ದ್ವೀತಿಯ ಪಿಯುಸಿ ವರೆಗಿನ ವ್ಯಾಸಂಗವೂ ಅಲ್ಲೇ...ಸದ್ಯ ಪದವಿ ಶಿಕ್ಷಣ, ಬೆಂಗಳೂರಿನ ಶೇಷಾದ್ರಿಪುರಂ ಸಂಜೆ ಪದವಿ ಕಾಲೇಜ್ ನಲ್ಲಿ. ಊರೆಂದರೆ ಅದಮ್ಯ ಮೋಹ, ಪ್ರೀತಿ.. ಜೀವನದ ಏಳುಬೀಳು ಅಲ್ಲಿಂದ ಇಲ್ಲಿಗೆ ಎಳೆದುಕೊಂಡು ಬಂದಿದ್ದರೂ ಊರಿನೆಡಗಿನ ಸೆಳೆತ ಸೂಜಿಗಲ್ಲಿನಂತೆ ಸೆಳೆಯುತ್ತಲೇ ಇದೆ.. ಇಲ್ಲಿನ ಕಾಂಕ್ರಿಟ್ ಕಾಡು ನಮ್ಮೂರಿನ ಹಸುರಿನ ಸೊಬಗಿಗೆ ಸಮಾನಾಗಿ ನಿಲ್ಲುವುದೇ ಇಲ್ಲಾ.. ಇದು ಹೊಟ್ಟೆ ಪಾಡಾದರೆ, ಅದು ಜೀವನಾಡಿ..  ಅಮ್ಮ,ಅಪ್ಪ ತಮ್ಮಂದಿರೆಡೆಗೆ ನಿಲ್ಲದ ತುಡಿತ.. ಇಂತಿಪ್ಪ ಭಾವನೆಯ ನನಗೆ ನಟಣ್ಣನ "ಬಿಟ್ಟು ಬಂದ ಮಣ್ಣಿಗೂ ಮಡಿಲಿಗೂ ಮರಳುವುದು ಸುಲಭವಲ್ಲ..." ಈ ಮಾತು fb ನಲ್ಲಿ ಓದಿದಾಗಿನಿಂದ ಬಹಳ ಕಾಡುತ್ತದೆ..

ಬರವಣಿಗೆ ಹೇಗೆ ಆರಂಭವಾಯಿತು ಎನ್ನುವುದರ ಬಗ್ಗೆ ನನಗಿನ್ನೂ ಸ್ಪಷ್ಟ ಅರಿವಿಲ್ಲ..ಮೊದಲು ಬರೆದ ಕವನ, ಕತೆಯ ನೆನಪೂ ನನಗಿಲ್ಲ..ಅದನ್ನೆಲ್ಲಾ ಜೋಡಿಸಿಟ್ಟುಕೊಳ್ಳಬೇಕೆನ್ನುವ ಜ್ಞಾನವೂ ಇರಲಿಲ್ಲ.. ಓದುವ ಹುಚ್ಚು ಅಪ್ಪ ಅಮ್ಮ ಮತ್ತು ಅಜ್ಜನ ಬಳುವಳಿ.. ಬಾಲ್ಯದಲ್ಲಿ ನೋಡುತ್ತಿದ್ದ ಶಕ್ತಿಮಾನ್, ಆರ್ಯಮನ್, ಶಕಲಕ ಬೂಮ್ ಬೂಮ್ ಧಾರಾವಾಹಿಗಳು, ತುಂತುರು, ಬಾಲಮಂಗಳದ ಮಾಮಿ ಕಾಲಂ, ಡಿಂಗ,ಶಕ್ತಿಮದ್ದು ಗಳು ಕಾಲ್ಪನಿಕ ಶಕ್ತಿಯನ್ನು ವಿಸ್ತರಿಸಿದ್ದಿರಬೇಕು..ನನ್ನ ಅಮ್ಮ ನಾ ಬರೆದ ಪ್ರತಿಯೊಂದಕ್ಕೂ ಮೊದಲ ಓದುಗಿ..ಅಮ್ಮನ ಬೆಂಬಲವೇ ನನ್ನ ಶಕ್ತಿ .ಅಮ್ಮನ ಪ್ರೋತ್ಸಾಹ ವಿಲ್ಲದೆ ಯಾವುದೂ ಸಾಧ್ಯವಾಗುತ್ತಿರಲಿಲ್ಲ..ನನ್ನನ್ನು ಅವಳು ಅಣಿಗೊಳಿಸುತ್ತಿದ್ದ ರೀತಿಯೇ ನನ್ನ ವ್ಯಕ್ತಿತ್ವಕ್ಕೆ ಕಾರಣ. ಅಮ್ಮನೊಂದಿಗೆ ಸಾಥ್ ನೀಡುತ್ತಿದ್ದ ಅಜ್ಜ, ಮಾವ.. ನನ್ನ ಕುಟುಂಬಕ್ಕೆ ನನ್ನ ಮೊದಲ ಥ್ಯಾಂಕ್ಸ್..

ನಾನು, ನನ್ನ ಪ್ರಾಥಮಿಕ ಶಾಲಾ ಹಂತದಲ್ಲೇ ಬಹಳಷ್ಟು ಕಾದಂಬರಿಗಳನ್ನು ಓದಿ ಮುಗಿಸಿದ್ದು..ಮುಖ್ಯವಾಗಿ ಅಮ್ಮನಿಷ್ಟದ ಪ್ರಕಾರವಾದ ಸಾಮಾಜಿಕ ಕಾದಂಬರಿಗಳು(ಅಮ್ಮನ ವಿರೋಧದ ನಡುವೆಯೂ ಓದಿ ಬಿಟ್ಟಿದ್ದೆ..) ಮೂರನೇಯ ತರಗತಿಯಲ್ಲಿ ಇದ್ದಾಗ ಸಣ್ಣ ಪುಟ್ಟ ಚುಟುಕುಗಳನ್ನು ನನ್ನದೇ ಆದ ದಾಟಿಯಲ್ಲಿ ಎದ್ದೆ-ಬಿದ್ದೆ-ಒದ್ದೆ ಮುಂತಾದ ಪ್ರಾಸಗಳನ್ನು ಉಪಯೋಗಿಸಿ ಬರೆಯುತ್ತಿದ್ದೆ. 5ನೇ ತರಗತಿಯಲ್ಲಿದ್ದಾಗ ಮೊದಲ ಬಾರಿಗೆ ಪ್ರತಿಭಾಕಾರಂಜಿಯ ಕತೆ ಹೇಳುವ ಸ್ಪರ್ಧೆಗೆ ಸ್ವಂತವಾಗಿ ಕತೆ ರಚಿಸಿ, ಸಭೆಗೆ ಪ್ರಸ್ತುತ ಪಡಿಸಿ ಬಹುಮಾನ ಪಡೆದಿದ್ದೆ.ಅದಕ್ಕೆ ಕಾರಣವಾಗಿದ್ದು ನಳಿನಿ ಟೀಚರ್. ಅಲ್ಲಿಂದ ಸಣ್ಣ ಪುಟ್ಟ ಕತೆ ಬರೆಯುವ ಹವ್ಯಾಸ ಆರಂಭವಾಯಿತು.. ಹೈ ಸ್ಕೂಲ್ ಜೀವನ ನನ್ನ ಜೀವನದ ಬಹು ಮುಖ್ಯ ತಿರುವು. ಅಲ್ಲೇ ನಾನು ಮುನಿರಾಜ್ ಸರ್ ಅಂತಹ ಗುರುಗಳನ್ನು ಪಡೆದ್ದಿದ್ದು. ನಿತೇಶ್ ಸರ್ ಅಂತಹ ಸ್ನೇಹಜೀವಿ ಶಿಕ್ಷಕರನ್ನು ಪಡೆದಿದ್ದು. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ನಾನು ಭಾಗವಹಿಸಲು ಮುಖ್ಯ ಪ್ರೇರಕ ಶಕ್ತಿಯೇ ಅವರುಗಳು. ಚರ್ಚಾ ಸ್ಪರ್ಧೆ, ಭಾಷಣ, ಪ್ರಬಂಧ, ನಾಟಕ ಹೀಗೆ ಭಾಗವಹಿಸುತ್ತಿದ್ದೆ. ನಾನು ಓದಿದ ಪುಸ್ತಕಗಳಲ್ಲಿ ಅತಿ ಹೆಚ್ಚು ಪುಸ್ತಕಗಳನ್ನು ಓದಿದ್ದು ಆ ಕಾಲಘಟ್ಟದಲ್ಲೇ..ನೆಹರು ಪರದೆ ಸರಿಯಿತು,ಗಾಂಧಿ ಮತ್ತು ಗೋಡ್ಸೆ, ಸಾವರ್ಕರ್, ಭಗತ್ ಸಿಂಗ್, ಬದುಕಲು ಕಲಿಯಿರಿ...ಹೀಗೆ ಪುಸ್ತಕಗಳ ಪಟ್ಟಿ ಬೆಳೆಯುತ್ತದೆ..

ಇದಾದ ಮೇಲೆ ಬ್ಲಾಗಿನಂಗಳ ಮತ್ತು ಮುಖಪುಟ ನನ್ನಮೇಲೆ ಪ್ರೋತ್ಸಾಹದ ಸುರಿಮಳೆಯನ್ನೇ ಸುರಿಸಿದೆ.. ನಾ ಬರೆದ ಲೇಖನ,ಕವಿತೆಗಳಿಗೆ ಪ್ರತಿಕ್ರಿಯೆಯ ರೂಪದಲ್ಲಿ ಪ್ರೋತ್ಸಾಹ ನೀಡಿದೆ, ತಪ್ಪಾದಾಗ ತಿದ್ದಿದೆ. ಎಲ್ಲೊ ಇದ್ದು ತನ್ನ ಪಾಡಿಗೆ ತಾನು ಆತ್ಮ ಸಂತೋಷಕ್ಕಾಗಿ ಬರೆಯುತ್ತಿದವಳನ್ನು ಜಗತ್ತಿನ ಮುಂದೆ ತಂದು ನಿಲ್ಲಿಸಿದೆ..ಬ್ಲಾಗ್ ಬಂಧುಗಳ ಸಹೃದಯತೆಗೆ ಹೇಗೆ ಥ್ಯಾಂಕ್ಸ್ ಹೇಳಲಿ? ಮೌನರಾಗ ಮತ್ತು ಕನಸು ಕಂಗಳ ತುಂಬಾ.. ಎನ್ನುವ 2 ಬ್ಲಾಗ್ ಗಳನ್ನು ಎರಡು ವರುಷಗಳಿಂದ ನಡೆಸುತ್ತಾ ಬಂದಿದ್ದೇನೆ. ಬರೆದಿದ್ದು, ಓದಿದ್ದು ತೀರಾ ಕಡಿಮೆ..ಆ ನಿಟ್ಟಿನಲ್ಲಿ ನಾನಿನ್ನೂ ಬಹಳ ಚಿಕ್ಕವಳು. ಕನಸು ಕಂಗಳ ತುಂಬಾ ಬಣ್ಣದ ಕನಸುಗಳಿವೆ. ನನಸಾಗಲು ನನ್ನ ಶ್ರಮ, ನಿಮ್ಮ ಆಶೀರ್ವಾದ, ದೈವ ಕೃಪೆ ಅತ್ಯಗತ್ಯ. ಬ್ಲಾಗ್ ನಲ್ಲಿ ಆರಂಭದ ದಿನಗಳಿಂದಲೂ ಪ್ರೋತ್ಸಾಹಿಸುತ್ತಾ ಬಂದ ರವಿ ಮೂರ್ನಡ್ ಸರ್, ಅಜಾದ್ ಸರ್, ಗೌಡ್ರು, ಶಶೀ, ಸುರೇಖಾ, ಬದರಿ ಸರ್, ಅಣ್ಣ ಮಂಜು, ಗೆಳೆಯ ವಿನಯ್ ಯಿಂದ ಹಿಡಿದು ಇತ್ತೀಚಿನ ಸಂಧ್ಯಾ, ಚಿನ್ಮಯ್ ಮತ್ತು ಹೆಸರಿಸಲಾಗದ ಅಷ್ಟೂ ಜನಕ್ಕೂ ನನ್ನ ಕೋಟಿ ಕೋಟಿ ನಮನಗಳು..
ಮಾತುಕತೆಗೆ ಕರೆದು ಎಲೆಮರೆಕಾಯಿಯಲ್ಲಿ ನನಗೂ ಒಂದು ಜಾಗ ನೀಡಿದ್ದಕ್ಕೆ ಸಹೋದರ ನಟರಾಜ್ ಅವರಿಗೂ ಧನ್ಯವಾದ..

ನಿಮ್ಮೆಲ್ಲರ ಪ್ರೋತ್ಸಾಹ ಹೀಗೆ ನಿರಂತರವಾಗಿರಲಿ.. ತಪ್ಪು ಒಪ್ಪು ತಿಳಿಯದೇ ಅಂಜಿಕೆ ಅಳುಕಿನಿಂದಲೇ ನನ್ನ ಪರಿಚಯ ಮಾಡಿಕ್ಕೊಟ್ಟಿದ್ದೇನೆ ಇಷ್ಟವಾದರೆ ಒಪ್ಪಿಸಿಕ್ಕೊಳ್ಳಿ, ತಪ್ಪಿದ್ದರೆ ತಿದ್ದಿ ಬುದ್ಧಿ ಹೇಳಿ...
ಧನ್ಯವಾದಗಳೊಂದಿಗೆ
ಇಂತಿ ನಿಮ್ಮ,
ಸುಷ್ಮಾ ಮೂಡುಬಿದಿರೆ."

ಎಂದು ಚಂದವಾಗಿ ತನ್ನ ಪರಿಚಯ ಮಾಡಿಕೊಂಡ ಸುಷ್ಮಾರವರ ಮಾತುಗಳು ನಿಮಗೆ ಇಷ್ಟವಾಯಿತು ಎಂದುಕೊಳ್ಳುವೆ ಸಹೃದಯಿಗಳೇ.. ಸುಷ್ಮಾರವರ ಬ್ಲಾಗುಗಳ ಲಿಂಕ್ ಈ ಕೆಳಗೆ ನೀಡಿರುವೆ. ಸಮಯವಿದ್ದಾಗ ಅವರ ಬ್ಲಾಗುಗಳ ಮೇಲೆ ಒಮ್ಮೆ ಕಣ್ಣಾಡಿಸಿ..
http://mounaraaga-suvi.blogspot.in/
http://kanasukangalathumbaa.blogspot.in/

ಸುಷ್ಮಾರವರ ಬರಹದ ಮತ್ತೊಂದು ಚಂದದ ತುಣುಕು ಇಗೋ ನಿಮಗಾಗಿ..

"ಮದುವೆ ಎನ್ನುವುದೊಂದು ಆಗುವುದಕ್ಕಿಂತ ಮುಂಚೆ ನಾವು ಹುಡುಗಿಯರು  ತೀರಾ ಭಿನ್ನವಾಗಿ ಯೋಚಿಸುತ್ತಿರುತ್ತೇವೆ...ಗಂಡುಬೀರಿ, ಬಜಾರಿ ಅನಿಸಿಕೊಂಡದಾರೂ ಗಂಡು ಮಕ್ಕಳಿಗೆ ನಾವು ಸಮ ಎನ್ನುವುದನ್ನ ಸಾಬೀತು ಮಾಡ ಹೊರಡುತ್ತೇವೆ...ಜಿದ್ದಿಗೆ ಬಿದ್ದಾದರೂ ಪೈಪೋಟಿ ನೀಡುತ್ತೇವೆ...ಮದುವೆ, ಮನೆ, ಗಂಡ, ಮಕ್ಕಳು...ಥತ್, ನಮ್ಮ ಸ್ವಾತಂತ್ರ್ಯ ಕಿತ್ತುಕೊಳ್ಳಲೇ ಮಾಡಿರೋ ವ್ಯವಸ್ಥೆ ಎಂದು ತಾಸುಗಟ್ಟಲೆ ಗೆಳತಿಯರ ಮಧ್ಯ  ಭಾಷಣ ಬಿಗಿದಿರುತ್ತೇವೆ... ಇಷ್ಟಾದರೂ ಮನೆಯಲ್ಲಿ ಹಿಡಿದು ಮದುವೆ ಮಾಡೇ ಮಾಡುತ್ತಾರೆ...ಸರಿ ಮದುವೆಯಾಗಿತ್ತಲ್ಲ ಮಕ್ಕಳಂತೂ ಸದ್ಯದ ವಿಚಾರ ಅಲ್ಲಾ...ಎರಡು-ಮೂರು  ವರ್ಷ ಗ್ಯಾಪ್ ಇರಲಿ ಎಂದುಕೊಳ್ಳುತ್ತಲೇ ಮಡಿಲು ತುಂಬಿರುತ್ತದೆ...ಇಲ್ಲಿಯ ತನಕ 'ನಾವೂ ಗಂಡಿನ ಹಾಗೆ' ಅಂದುಕೊಂಡ ಮುಖವಾಡ ಕಳಚುವುದು ಈಗಲೇ...ಇದು ಅಮ್ಮನಾಗುವ ಖುಷಿ...ಹೆಣ್ತನ, ತಾಯ್ತನ ಜಾಗೃತವಾಗುವ ಹೊತ್ತು.. ಪೂರ್ತಿಯಾಗಿ ಮಾತೃ ಭಾವವನ್ನು ಆಸ್ವಾದಿಸುವ ಹೊತ್ತು.. ಗಂಡಾಗಿ ಇಂತಹ ಆನಂದ ಪಡೆಯಲು ಸಾದ್ಯವೇ ಎಂದೆಣಿಸುವಾಗ ಬಜಾರಿ ಕಳೆದು ಹೋಗುತ್ತಾಳೆ.. ಮೊಗ್ಗು ಅರಳುವ ಸಮಯದ ನಾವಿನ್ಯ ಭಾವದ ಹೆಣ್ಣು ಮೈದಳೆಯುತ್ತಾಳೆ.."

ಮತ್ತೆ ಸಿಗೋಣ

ಇತಿ
ನಿಮ್ಮ ಪ್ರೀತಿಯ
ನಟರಾಜು :))