ಸೋಮವಾರ, ನವೆಂಬರ್ 19, 2012

ಎಲೆ ಮರೆ ಕಾಯಿ 

ಖಾಲಿ ಹಾಳೆಯ ಮೇಲೆ
ಕಸಿವಿಸಿಯ ಮಸಿಯ ಹಸಿ
ಭಾವಗಳ ವಿಶ್ರಾಮಕೆ
ಬಿಳಿ ಹಾಳೆಯ ಹಾಸಿಗೆ

ಆಂತರ್ಯದ ತೊಟ್ಟಿಲು
ಲೇಖನಿಯ ಮಸಿಯ ಬಟ್ಟಲು
ಅದ್ದಿ-ಬಸಿದು ಬರೆಯುತಿರುವೆ
ಅಂತರಾಳ ಮುಟ್ಟಲು..

ಮೇಲಿನ ಸಾಲುಗಳನ್ನು ಓದುತ್ತಿದ್ದಂತೆ ಹಿರಿಯ ಲೇಖಕರಾದ ಗುಲ್ಜಾರ್ ರವರು ಸಂದರ್ಶನವೊಂದರಲ್ಲಿ ಹೇಳಿದ್ದ "ನಮ್ಮ ದುಃಖ, ದುಗುಡ, ದುಮ್ಮಾನಗಳ ಹೀರಿಕೊಳ್ಳುವ ಶಕ್ತಿ ಬರವಣಿಗೆಗೆ ಇದೆ" ಎನ್ನುವಂತಹ ಮಾತು ನೆನಪಾಯಿತು. ಕಷ್ಟ ಬಂದಾಗ ಎಲ್ಲರಿದ್ದರೂ ಯಾರೂ ಇಲ್ಲದಂತಹ ಭಾವ ನಮ್ಮನ್ನು ಒಮ್ಮೊಮ್ಮೆ ಆವರಿಸಿಬಿಡುತ್ತದೆ. ಆಗ ಯಾಕೋ ಯಾರೊಡನೆಯೂ ಮಾತು ಬೇಕೆನಿಸುವುದಿಲ್ಲ. ಯಾರನ್ನು ನೋಡಲು ಸಹ ಮನಸ್ಸು ಇಚ್ಚಿಸುವುದಿಲ್ಲ. ದುಃಖ ನಮ್ಮೊಳಗೆ ಮಡುಗಟ್ಟುತ್ತಾ ಹೋಗುತ್ತದೆ. ಕೆಲವರು ಹತ್ತಿರ ಎನಿಸಿಕೊಂಡವರ ಜೊತೆ ಒಂದಷ್ಟು ಮನದ ದುಗುಡಗಳನ್ನು ಹಂಚಿಕೊಂಡರೂ ನಾವು ಹಗುರಾಗುತ್ತೇವೋ ಏನೋ ಗೊತ್ತಿಲ್ಲ. ಆದರೆ ಡೈರಿಯೊಂದನ್ನು ಬರೆದಿಡುವ ಅಭ್ಯಾಸವಿದ್ದರೆ ಖಂಡಿತಾ ನಾವು ಬರೆದು ಬರೆದು ಹಗುರವಾಗಬಹುದು. ಒಬ್ಬ ಆತ್ಮೀಯ ಗೆಳೆಯನಿಗಿಂತ ಎತ್ತರದ ಸ್ಥಾನದಲ್ಲಿ ನಮ್ಮ ಡೈರಿ ನಿಲ್ಲುತ್ತದೆ ಎಂದರೆ ತಪ್ಪಾಗಲಾರದು. ನೋವಿನಿಂದ ಹೊರ ಬರಬೇಕು ಎಂದರೆ ನಾವು ಮಾತನಾಡುವುದಕ್ಕಿಂತ ಹೆಚ್ಚು ಬರೆಯಬೇಕು ಎನಿಸಿದ್ದು ಭಾವ ದರ್ಪಣ ಎಂಬ ಚಂದದ ಬ್ಲಾಗಿನಲ್ಲಿ ಮೇಲಿನ ಕವಿತೆಯ ಸಾಲುಗಳನ್ನು ಕಂಡಾಗ..

ಭಾವ ದರ್ಪಣದ ಒಡತಿಯ ಲೇಖನಗಳ ಕುರಿತಾಗಲಿ, ಕವಿತೆಗಳ ಕುರಿತಾಗಲಿ ಮಾತನಾಡಲು ಯಾಕೋ ನನ್ನಲ್ಲಿ ಶಕ್ತಿ ಇಲ್ಲ. ಅವರ ಬರವಣಿಗೆಯ ತುಣುಕೊಂದನ್ನು ಈ ಕೆಳಗೆ ನೀಡಿರುವೆ.. ನೀವೇ ಮನಸ್ಸಿಟ್ಟು ಓದಿಕೊಳ್ಳಿ..

"ಇಂದು ಸಂಜೆ ಏನೋ ಅಳುಕು ಮನದಲ್ಲಿ.. ಏನು ಅಂತ ಗೊತ್ತಿಲ್ಲ.. ಅರ್ಥಾನೂ ಆಗ್ತಿಲ್ಲ.. ಯಾವುದೋ ನೋವಿನ ಎಳೆ.. ಏನೋ ತಳಮಳ..

ಕತ್ತಲಲ್ಲಿ ಏನೋ ತಡಕಾಡುತ್ತಿರೋ ಅನುಭವ..ಒಂದೊಂದು ಸಲ ಬದುಕೇ ಕತ್ತಲಲ್ಲಿ ಗೊತ್ತಿರದ ವಸ್ತುವಿಗಾಗಿ ತಡಕಾಡುವುದೇನೊ ಅನ್ನೋ ಭಾವನೆ.. ಈ ಮನಸು, ಅದರ ಅಸ್ತಿತ್ವ ಅದರ ಆಳ.. ಅದರ ನಿರೀಕ್ಷೆ.. ಅದರ ತಳಮಳ ಎಲ್ಲ ನೋಡಿದರೆ.. ನನಗೆ ನಾನೇ ಅಪರಿಚಿತಳು ಅನಿಸುತ್ತೆ..ಅಂಥದರಲ್ಲಿ ಇನ್ನೊಂದು ಮನಸು ನನ್ನನ್ನು ಅರ್ಥ ಮಾಡಿಕೊಳ್ಳಲಿ ಅನ್ನುತ್ತೆ ಈ ಮುಗ್ಢ ಮೂರ್ಖ ಮನಸು..ಎಷ್ಟು ಗೊಂದಲಮಯ ಅಲ್ವಾ??  ದಿನದ ರಭಸದ ಜಂಜಾಟಗಳಲಿ.. ಹೊರ-ಪ್ರಪಂಚದ ಸೊಗಸು ಸವಿಯುವ ಗದ್ದಲದಲ್ಲಿ.. ದಿನ-ನಿತ್ಯದ ಕೆಲಸದ ಭರಾಟೆಯಲ್ಲಿ.. ಮೆಲ್ಲನೆ ಇಣುಕಿ ನೋಡುತ್ತೆ ಮನ.. ಇದ್ದರೂ ಇಲ್ಲದಂತಿರೋ ಇದು.. ಒಂದೊದು ಸಲ ಇಲ್ಲದ ತಲ್ಲಣ ಹುಟ್ಟಿಸುತ್ತೆ.. ಮನಸು ಅನ್ನೊದೇ ಇಲ್ಲದಿದ್ರೆ..?! ಅದರಿಂದಾಗೋ ಪ್ರಯೋಜನಗಳು ಮತ್ತು ಹಾನಿಗಳ ಬಗ್ಗೆನೇ ಪುಟಗಟ್ಟಲೇ ಬರೀಬಹುದೇನೋ.. ಈ ಮನಸು ಮತ್ತೆ ಬುಧ್ಧಿ ಒಟ್ಟಿಗೆ ಕೆಲಸ ಮಾಡೊ ರೀತಿ ಮಾತ್ರ ನನಗೆ ಅಚ್ಚರಿ ಹುಟ್ಟಿಸುತ್ತೆ.. ಒಂದು ಸಲ ಮನಸಿಗೆ ಬುದ್ಧಿ ಇಷ್ಟ ಆಗಲ್ಲ ಇನ್ನೊಂದು ಸಲ ಬುದ್ಧಿಗೆ ಮನಸು ಇಷ್ಟ ಆಗಲ್ಲ.. ಮತ್ತೊಮ್ಮೆ ಎರಡೂ ಗೆಳೆಯರು.. ಈಗ ಬರೀತಿದಿನಲ್ಲ.. ಇದು ಮನಸು ಅನ್ಲಾ? ಅಥವ ಬುದ್ಧಿ ನಾ?

ಏನೇ ಇರಲಿ ಮನಸಿಗೆ ಅನಿಸಿದ್ದನ್ನು ವ್ಯಕ್ತ ಪಡಿಸೋಕೆ ಇರೋ ಈ ಮುದ್ದಾದ ಭಾಷೆಗೆ.. ಈ ಹಾಳೆಗೆ.. ಈ ಲೇಖನಿಗೆ ನಾನು ಚಿರ-ಋಣಿ.. ಇವಿರಲಿಲ್ಲ ಅಂದರೆ.. ನನ್ನ ಆಂತರಿಕ ಬದುಕನ್ನು ಊಹಿಸಿಕೊಳ್ಳೋದೇ ಅಸಾಧ್ಯ..."

ಎನ್ನುವ ನಮ್ಮ ನಡುವಿನ ಉತ್ತಮ ಯುವ ಲೇಖಕಿಯರಲ್ಲಿ ಮಂಜುಳಾ ಬಬಲಾದಿಯವರೂ ಸಹ ಒಬ್ಬರು. ಅವರ ಜೊತೆ ಹಿಂದೊಮ್ಮೆ ಎಲೆ ಮರೆ ಕಾಯಿಗಾಗಿ ನಡೆಸಿದ ಮಾತುಕತೆ ಸಹೃದಯಿಗಳೇ ಇಗೋ ನಿಮಗಾಗಿ..

ಮಂಜುಳಾ ಬಬಲಾದಿ

"ನಲ್ಮೆಯ ನಟರಾಜ್,
ನಿಮ್ಮ ಎಲೆ ಮರೆ ಕಾಯಿಗಳ ಜೊತೆ ಮಾತುಕತೆಗೆ ಆಹ್ವಾನಿಸಿದ್ದಕ್ಕೆ ನಾನು ಅಭಾರಿ. ಈಗ ಬರೆಯಲು ಕೂತರೆ ಏನು ಬರೆಯಬೇಕೆಂಬ ಭಾರಿ ಪ್ರಶ್ನೆ? ಈ ಘಳಿಗೆಯಲ್ಲಿ ನನಗನಿಸಿದ್ದು, ನಿಮ್ಮ ಮುಂದೆ ಅರುಹುತ್ತಿದ್ದೇನೆ ಅಷ್ಟೇ. ನಾನು ಹುಟ್ಟಿದ್ದು ಜಮಖಂಡಿ, ಬೆಳೆದದ್ದು ಕರ್ನಾಟಕ (ಬ್ಯಾಂಕ್ ಉದ್ಯೋಗಿಯಾಗಿದ್ದ ನಮ್ಮ ತಂದೆ ಜೊತೆ ಊರೂರು ಸುತ್ತಿದ್ದು), ಕೊನೆಗೆ ಕಾಲೇಜು ದಿನಗಳಿಂದ ನಮ್ಮದಾಗಿಸಿಕೊಂಡ ಊರು ಧಾರವಾಡ. ಬದುಕಿನ ಅಚ್ಚುಗಳು ನನಗಾಗಿ ಮೊದಲೇ ತಯಾರಾಗಿದ್ದವೇನೋ ಅನ್ನುವ ಥರದಲ್ಲಿ.. ಶಾಲೆಯಲ್ಲಿ ಜಾಣೆಯೆನಿಸಿಕೊಂಡಿದ್ದ ನಾನು ಸರಾಗವಾಗಿ ಬಿ.ಈ. ಓದಿಬಿಟ್ಟೆ. ನನಗೆ ತಿಳಿಯುವ ಮೊದಲೇ ದೊಡ್ಡ ಸಾಫ್ಟ್ ವೇರ್ ಸಂಸ್ಥೆಯಲ್ಲಿ ಕೆಲಸ. "ಇದ್ದುದೆಲ್ಲವ ಬಿಟ್ಟು.. " ಎನ್ನುವ ಹಾಗೆ, ಈಗ ಸಾಫ್ಟ್ ವೇರ್  ಡೆವೆಲಪ್‌ಮೆಂಟ್ ಬಿಟ್ಟು ಕಂಟೆಂಟ್ ಡೆವೆಲಪ್ ಮಾಡಲು ತೊಡಗಿದ್ದೇನೆ . ಬದುಕಿನ ಅನಿಶ್ಚಿತತೆಗಳನ್ನು ಪ್ರೀತಿಸುತ್ತ!

ಚಿಕ್ಕವಳಿದ್ದಾಗಿಂದ ಬರೆಯುವ ಗೀಳು, ಓದುವು ಹುಚ್ಚು.. ಆದರೆ ಅದು ನನ್ನಲ್ಲಿರುವ ಪ್ರತಿಭೆ ಎಂದು ನಾನೆಂದೂ ಗುರುತಿಸಲೇ ಇಲ್ಲ! ಹೀಗೆ ಮನಸಿನ ಸಂತೋಷಕ್ಕೆ ಕೆಲವೊಮ್ಮೆ, ಸಮಾಧಾನಕ್ಕೆ ಮಗದೊಮ್ಮೆ, ಬರೆಯುತ್ತಲೇ ಹೋದೆ.. ಹಲವಾರು ಬಾರಿ ಅದನ್ನು ಹಂಚಿಕೊಳ್ಳುವ ಗೋಜಿಗೂ ಹೋಗದೇ.. ನಂತರ ಪರಿಚಯವಾದದು ಬ್ಲಾಗ್ ಪ್ರಪಂಚ.. ಬರಹಗಳಿಂದ ಚಿರಪರಿಚಿತರಾಗಿದ್ದ ಹಲವರು, ವೈಯಕ್ತಿಕವಾಗಿ ಪರಿಚಯವಾಗಲೇ ಇಲ್ಲ.. (ಫೇಸ್‍ಬುಕ್ ಬಂದ ಮೇಲೆ ಎಲ್ಲ ಬದಲಾಯಿತು.. ನನಗೆ ಖುಶಿಯಾಗುವ ತೆರದಲ್ಲಿ ನನಗೆ ಇಂತಹವರ ಬರಹವೇ ಇಷ್ಟ ಅಂತ ಹೇಳುವುದು ಕಷ್ಟ.. ಮನಸಿಗೆ ಹತ್ತಿರವಾಗುವಂಥ ಎಲ್ಲವನ್ನೂ ನಾ ಓದುತ್ತೇನೆ.. ’ಕೆ.ಎಸ್. ನಿಸಾರ್ ಅಹ್ಮದ್’ ಅವರ ಕವನಗಳು ನನಗೆ ಹಲವಾರು ಬಾರಿ ಸ್ಫೂರ್ತಿ ನೀಡಿವೆ.. ಹೀಗೇ ಸಾಗಿದೆ ಬರಹ, ಓದು, ಬದುಕು ಮತ್ತು ಕನಸು.. ಎಲ್ಲ ಉದಯೋನ್ಮುಖ ಬರಹಗಾರರಿಗಿರುವಂತೆ, ಜನ-ಮನಕ್ಕೆ ಹತ್ತಿರವಾಗುವಂಥ ಕವನ ಸಂಕಲನವೊಂದನ್ನು ಹೊರ ತರಬೇಕೆನ್ನುವುದು ಕನಸು.. (ಅಥವಾ ಕನಸಿನ ಆರಂಭವೆನ್ನಲೇ? ) ಅದು ಇಷ್ಟೇ ಸಮಯದಲ್ಲಿ ನನಸಾಗಬೇಕು ಎಂಬ ಹಟವೂ ನನಗಿಲ್ಲ.. ’ಕಾಲ ಕೂಡಿ ಬಂದಾಗ’ ಖಂಡಿತ ಕನಸುಗಳು ಈಡೇರುವವು ಎಂದು ಬಲವಾಗಿ ನಂಬುವವಳು ನಾನು."

ಎಂದು ಮಾತು ಮುಗಿಸಿದ ಮಂಜುಳಾರವರ ಮಾತು ನಿಮಗೆ ಇಷ್ಟವಾಯಿತು ಎಂದುಕೊಳ್ಳುವೆ. ಮಂಜುಳಾರವರ ಬ್ಲಾಗಿನ ಲಿಂಕ್ ಈ ಕೆಳಗೆ ನೀಡಿರುವೆ.. ಸಮಯವಿದ್ದಾಗ ಓದಿ ಗೆಳೆಯರೇ..
http://bhava-darpana.blogspot.in/

ಮಂಜುಳಾರವರ ಒಂದೆರಡು ಕವನಗಳನ್ನು ಈ ಕೆಳಗೆ ನೀಡಿರುವೆ.. ಮನಸ್ಸಿಟ್ಟು ಓದಿಕೊಳ್ಳಿ ಗೆಳೆಯರೇ..

ಮನಸೆಂಬ ಕೂಸಿಗೆ
ಕನಸುಗಳ ತುತ್ತನುಣಿಸಿ
ಭಾವನೆಗಳ ಮುತ್ತನಿಟ್ಟು
ಕಲ್ಪನೆಗಳ ಆಟಿಕೆ ನೀಡಿ
ಪ್ರೀತಿಯ ಅಕ್ಕರೆಗರೆದು
ಮಂದಹಾಸವ ಉಡುಗೊರೆ
ನೀಡಿದ ನಿನಗೆ
ನನ್ನ ಹೃತ್ಪೂರ್ವಕ ನಮನ
ನಿನಗಾಗಿ ನನ್ನ ಈ ಪುಟ್ಟ ಕವನ
*****

ಮನಸೊಂದು ಕುಡಿಯೊಡೆದ
ಮಧುರ ದಿನ
ಕನಸೊಂದು ಕಣ್ಬಿಟ್ಟ
ಮಧುರ ಕ್ಷಣ
ತನುವಲ್ಲಿ ತನುವರಳಿ
ಭುವಿಗೆ ಮರಳಿದ ದಿನ...

ಆ ಮನಸು ಮಡಿಲಾಗಿ
ಈ ಮನಸು ಮಗುವಾಗಿ
ಮನಸೆಲ್ಲ ನಗುವಾಗಿ
ನಕ್ಕು-ನಗಿಸಿದ ದಿನ
ಅತ್ತು-ಅಳಿಸಿದ ದಿನ

ಒಡಲ ಒಗಟು ಜೀವವಾದ ದಿನ
ಜೀವ ನಂಟು ಉಸಿರು ಪಡೆದ ದಿನ
ಕತ್ತಲಿಂದ ಬೆಳಕಿಗೆ ಕಣ್ಬಿಟ್ಟ ದಿನ
ಹೊಚ್ಚ ಹೊಸ ಬದುಕ ತೆರೆದಿಟ್ಟ ದಿನ

ನವ ಜೀವಕೆ ನಾಂದಿಯಾದ
ಆ ಸೋಜಿಗದ ದಿನ
ಪ್ರತಿ ವರುಷ ಮರಳುವುದು
ನೆನಪುಗಳ ನಗೆ ಚೆಲ್ಲಿ
ಮತ್ತೆ ಮರೆಯಾಗುವುದು
ಈ ಜನುಮ ದಿನ!
*****

ಮತ್ತೆ ಸಿಗೋಣ
ನಿಮ್ಮ ಪ್ರೀತಿಯ
ನಟರಾಜು





ಶುಕ್ರವಾರ, ನವೆಂಬರ್ 9, 2012


ಎಲೆ ಮರೆ ಕಾಯಿ ೬೪ 

ಒಮ್ಮೆ ನಿರ್ದೇಶಕರಿಂದ ಬರಹಗಾರನ ಹುದ್ದೆಗೆ ಕರೆ ಬಂದಿತ್ತು. 
ನಾನು ಸಮಯಕ್ಕೆ ಸರಿಯಾಗಿ ಕರೆದ ಜಾಗಕ್ಕೆ ಹೋಗಿದ್ದೆ.
ಬಿಡುವಿಲ್ಲದ ವೇಳಾಪಟ್ಟಿಯಲ್ಲಿ ಹೋದ ನನಗೆ 
ಮೊದಲ ಸರಳ ಪ್ರಶ್ನೆ "ನಿಮ್ಮ ಬರವಣೆಗೆ ನಾನು ಕಂಡಿಲ್ಲ, ಏನಾದರೂ ಬರೆದು ತೋರಿಸುತ್ತೀರಾ?" ಅಂತ ಒಂದು ಹಾಳೆ, ಪೆನ್ನು ಮುಂದಿಟ್ಟರು.
ಏನು ತೋಚಲಿಲ್ಲ.
ಕೊನೆಗೆ,
"ಬರವಣೆಗೆ ಒಂದು ಪ್ರಣಯದಂತೆ, ಅದನ್ನ ಅನ್ಯರ ಎದುರು ಮಾಡಲಾಗುವದಿಲ್ಲ" ಅಂತ ಬರೆದು ಎದ್ದು ನಿಂತೆ.

ಆ ಬರಹಗಾರ ಬರೆದ ಕೊನೆಯ ಸಾಲು ಯಾಕೋ ನನ್ನ ಮನದಲ್ಲಿ ಅಚ್ಚಳಿಯದೆ ನಿಂತುಬಿಟ್ಟಿದೆ. ಸೂಪರ್ ಸಾಲು ಅಂತಾರಲ್ಲ ಅಂತಹ ಸಾಲು ಅದು. ನಾನು ಸಂತೆಯ ಮಧ್ಯೆ ಕುಳಿತರೂ ಬರೆಯಬಲ್ಲೆ ಎಂದು ಕೆಲವರು ವಾದ ಮಾಡಬಹುದು. ಒಬ್ಬ ಚಿತ್ರಕಾರ ಖಾಲಿ ಹಾಳೆಯ ಮೇಲೆ ತನ್ನ ಪೆನ್ಸಿಲ್ ನಿಂದಲೋ, ಕುಂಚದಿಂದಲೋ, ಚಿತ್ರ ಮೂಡಿಸಿ ಬಣ್ಣ ತುಂಬುವಾಗ ಅವನ ಕಲೆಯನ್ನು ನೋಡುವ ಕಂಗಳು ಬೆರಗುಗಣ್ಣಿನಿಂದ ತದೇಕ ಚಿತ್ತದಿಂದ ನೋಡಲು ಶುರು ಮಾಡಿದರೂ ತನ್ನ ಧ್ಯಾನಕ್ಕೆ ಧಕ್ಕೆ ಬರದಂತೆ ಅವನು ಚಿತ್ರವೊಂದನು ಬಿಡಿಸಿಬಿಡಬಲ್ಲ. ಆದರೆ ಬರಹಗಾರನಿಗೆ ಸಂತೆಯಲ್ಲಿ ಕುಳಿತರೂ ಒಂದು ಏಕಾಂತ ಬೇಕಾಗುತ್ತೆ. ಪರಕಾಯ ಪ್ರವೇಶ ಅಂತಾರಲ್ಲ ಅಂತಹ ಸ್ಥಿತಿಯನ್ನು ಎಲ್ಲರೂ ಪೂರ್ತಿಯಾಗಿ ತಲುಪದೇ ಇದ್ದರೂ ತಮ್ಮದೇ ಒಂದು ಏಕಾಂತವನ್ನು ಸೃಷ್ಟಿಸಿಕೊಂಡ ಲೇಖಕರು ಅಚ್ಚರಿಗಳನ್ನು ಸೃಷ್ಟಿಸಬಲ್ಲರು. ಆ ಏಕಾಂತ ಎಷ್ಟು ಹೊತ್ತು ಸಿಗುತ್ತೆ, ಎಲ್ಲಿ ಸಿಗುತ್ತೆ, ಹೇಗೆ ಸಿಗುತ್ತೆ, ಅಂತಹ ಏಕಾಂತ ಮತ್ತೆ ಮತ್ತೆ ಸಿಗುತ್ತಾ ಅನ್ನುವುದರ ಮೇಲೆ ಜೊತೆಗೆ ಬರಹಗಾರನ ಆಸಕ್ತಿಯ ಮೇಲೆ ಬರವಣಿಗೆ ಸಹ ಬೆಳೆದು ನಿಲ್ಲುತ್ತೆ. ಪ್ರಣಯವೂ ಹಾಗೆಯೇ ಯಾರೋ ಬಂದು ಬಿಡುವರು ಎನ್ನುವ ಭಯದಿಂದ ಕೂಡಿದ ಪ್ರಣಯಕ್ಕೂ ಆ ಭಯದಿಂದ ಮುಕ್ತವಾದ ಪ್ರಣಯಕ್ಕೂ ತನ್ನದೇ ಆದ ಸಂಭ್ರಮವಿರುತ್ತದೆ. ಹೀಗೆ  ಪ್ರಣಯ ಮತ್ತು ಬರವಣಿಗೆಯನ್ನು ಒಂದನ್ನೊಂದನ್ನು ಹೋಲಿಸಿ ನೋಡಿದರೆ ಕೆಲವರಿಗೆ ತಪ್ಪಾಗಿ ಕಾಣುತ್ತದೇನೋ ಆದರೂ ನಮ್ಮ ಈ ಗೆಳೆಯ ಬರೆದ "ಬರವಣಿಗೆ ಒಂದು ಪ್ರಣಯದಂತೆ, ಅದನ್ನ ಅನ್ಯರ ಎದುರು ಮಾಡಲಾಗುವದಿಲ್ಲ" ಎಂಬುದು ಸತ್ಯ ಎಂದನಿಸುತ್ತದೆ. ಅಂದ ಹಾಗೆ "ಬರವಣಿಗೆ ಒಂದು ಪ್ರಣಯದಂತೆ" ಎಂಬ ಸಾಲು ಕಣ್ಣಿಗೆ ಬಿದ್ದಿದ್ದು "ಮನಸು ಮುಕ್ತ ಮಾತು" ಎಂಬ ಬ್ಲಾಗಿನಲ್ಲಿ.

ಒಂದು ಮಾಯಾಲೋಕದಲ್ಲಿ ಒಂದಷ್ಟು ಹೊತ್ತು ಇದ್ದು ನಂತರ ಎದ್ದು ಹೋಗುವ ಕೋಟ್ಯಾಂತರ ಮನುಷ್ಯರಲ್ಲಿ ನಾವು ಸಹ ಒಬ್ಬರು ಎನ್ನಬಹುದು. ಆ ಮಾಯಾಲೋಕ ಇಂದು ಪ್ರಪಂಚದ ಮೂಲೆ ಮೂಲೆಗೂ ಹರಡಿಕೊಂಡಿದೆ ಎಂದರೆ ಅತಿಶಯೋಕ್ತಿಯಾಗದು. ಆ ಮಾಯಾಲೋಕದಲ್ಲೇ ಕೆಲವರು ತಮಗೆ ಮನಸ್ಸಿಗೆ ಬಂದದ್ದನ್ನು ಬರೆಯುತ್ತಾರೆ ಹಾಗೆ ಬರೆದುದ್ದನ್ನು ತಮ್ಮ ಗೆಳೆಯರೊಡನೆ ಹಂಚಿಕೊಳ್ಳುತ್ತಾರೆ. ತರಾವರಿ ವಿಷಯ ವಸ್ತುಗಳುಳ್ಳ ಕತೆ, ಕವನ, ಲೇಖನ, ಫಿಲಾಸಫಿ ಇತ್ಯಾದಿಗಳ ಕುರಿತು ಈ ಮಾಯಾಲೋಕದಲ್ಲಿ ಬರೆಯುವವರು ಇದ್ದರೂ ಆ ಮಾಯಲೋಕವನ್ನೇ ಕುರಿತು ಬರೆಯುವವರು ಕಡಿಮೆ. ಆ ಮಾಯಾ ಲೋಕ ಯಾವುದು ಎಂದು ತಮಗೆ ತಿಳಿದಿದೆ ಎಂದುಕೊಳ್ಳುವೆ. ಹೌದು ಮಾಯಾಲೋಕವಾದ ಫೇಸ್ ಬುಕ್ ನಲ್ಲಿ ಬರೆಯುವವರು ಜಾಸ್ತಿ. ಆದರೆ ಫೇಸ್ ಬುಕ್ ಕುರಿತು ಬರೆದವರು ಕಮ್ಮಿ. ಫೇಸ್ ಬುಕ್ ಕುರಿತು ಒಂದು ಚಂದದ ಕವನ ಈ ಗೆಳೆಯನ ಬ್ಲಾಗಿನಲ್ಲಿ ಸಿಕ್ಕಾಗ ಯಾಕೋ ಒಂತರಾ ಖುಷಿಯಾಯಿತು.  

ಭೌತಿಕ ಅಸ್ತಿತ್ವ ಇರದ 
ಕೃತಕ ಕುತೂಹಲ ಜನಕ.
ನಮ್ಮ ಖಾಸಗಿ ಬದುಕಿನ 
ಪ್ರಾಯೋಜಕ. 
ನಾವು ಉಸಿರಾಡಿದ ಕ್ಷಣವನ್ನೂ  
ಬಣ್ಣ ಬಡೆಯುವ ತಾಣ    

ಲೈಕು, ಕಾಮ್ಮೆಂಟು 
ಗಳಿಸುವ ಗಂಭೀರ ಸ್ಪರ್ದೆ,
ಇವತ್ತಿನ ಗಳಿಕೆ ಇಷ್ಟು, ನಿನ್ನದೆಷ್ಟು....?
ಎಂಬ ಬಿಸಿನೆಸ್ಸಿನ ಮರ್ಯಾದೆ.

ಹೀಗೆ ಚಂದದ ಸಾಲುಗಳನ್ನು ಬರೆಯುತ್ತಲೇ ಸಾಹಿತ್ಯ ಕೃಷಿಯನ್ನು ತನ್ನದೇ ಶೈಲಿಯಲ್ಲಿ ಮಾಡುತ್ತಿರುವ ಗೆಳೆಯ ವಿಜಯ್ ಕುಮಾರ್ ಹೂಗಾರ್ ಅವರು ಎಲೆ ಮರೆ ಕಾಯಿಗಳ ಜೊತೆ ಮಾತುಕತೆಯ ಇಂದಿನ ಅತಿಥಿ.. ಕತೆ ಕವನಗಳ ಜೊತೆಗೆ ಪುಟ್ಟ ಪುಟ್ಟ ಚುಟುಕಗಳ ಮೇಲೂ ಹೆಚ್ಚು ಒಲವುಳ್ಳ ಗೆಳೆಯನ ಪರಿಚಯವನ್ನು ಓದುವ ಮೊದಲು ಈ ಕೆಳಗೆ ನೀಡಿರುವ ಅವರ ಕವನವೊಂದರ ಸಾಲುಗಳನ್ನು ಓದಿಕೊಂಡು ಅವರ ಪರಿಚಯವನ್ನು ಓದಿಕೊಳ್ಳಿ.. :))

ಕಾರಣ ಇಲ್ಲದ ಪ್ರೀತಿ,
ಅದು ನನ್ನ ಗುರುತಿನ ಚೀಟಿ.... 
ಈ ನನ್ನ ನೆಮ್ಮದಿ ಕಂಡು,
ಆ ಚಂದಿರ ಹೊಡೆಯಲಿ ಸೀಟಿ.....:-) 

ವಿಜಯಕುಮಾರ್ ಹೂಗಾರ್

"ಪ್ರಿಯ ನಟರಾಜು ಅವರೇ, ಪರಿಚಯ ನೀಡುವಷ್ಟು ಬರಹಗಾರನೆನಲ್ಲ. ದಯವಿಟ್ಟು ನನ್ನ ಪರಿಚಯ ಒಬ್ಬ ಬರಹಗಾರನಾಗಿ ಸ್ವೀಕರಿಸದೆ,ಗೆಳೆಯನಾಗಿ ಸ್ವೀಕರಿಸಿ. ಬೀದರ್ ಜಿಲ್ಲೆಯ ಬಸವ ಕಲ್ಯಾಣ್ ತಾಲೂಕಿನ ಬಟಗೇರಾ ಗ್ರಾಮದಲ್ಲಿ ನನ್ನ ಬೇರು. ತಂದೆ ಪ್ರಾಥಮಿಕ ಶಾಲಾ ಶಿಕ್ಷಕರಾದ್ದರಿಂದ ಊರಿಂದೂರಿಗೆ ಸುತ್ತಿ, ಏಳೂರು ನೀರು ಕುಡಿದು ಸದ್ಯಕ್ಕೆ ಗುಲ್ಬರ್ಗದಲ್ಲಿ ಮನೆ :-) ಪ್ರತಿ ಊರಿನಲ್ಲೋ ಒಂದೊಂದು ನೆನಪಿನ ಗಂಟು ಕಟ್ಟಿ ಮುಂದಿನೂರಿಗೆ ಸಾಗೋದು ನನ್ ಕೆಲಸ. ಬೀದಿಯಲ್ಲಿ ಹರಿದ ಭಿತ್ತಿ ಚಿತ್ರಗಳಂತೆ ಬಣ್ಣ ಕಳೆದುಕೊಂಡ ಬದುಕಿಗೆ, ಬಣ್ಣ ಹಚ್ಚೋದು ಕಲಿಸಿ, ಕೆಲಸ ಕೊಡಿಸಿದ್ದು ಬೆಂಗಳೂರು. ಊರಿಗೂ ಒಂದು ಜೀವ ಇರತ್ತೆ ಅಂತ ಕಂಡಿದ್ದು ಬಹುಶ ಇದೆ ಬೆಂಗಳೂರಲ್ಲಿ.ಇಲ್ಲಿ ಉಸಿರಾಡೋದೇ ಒಂದು ಖುಷಿ. ಬೆಂಗಳೂರಿನಲ್ಲಿ ತುಂಬಾ ಇಷ್ಟಾನೂಇಷ್ಟಗಳಲ್ಲಿ ವರನಟ ಡಾ. ರಾಜಕುಮಾರ್ ಪ್ರತಿಮೆಗಳು, ಕಟೌಟ್ ಗಳನ್ನ ಆಸೆಯಿಂದ ನೋಡೋದು, ಮೆಜೆಸ್ಟಿಕ್ ತಲೆಯಮೇಲೆ ನಿಂತು ಅಜ್ಞಾತ ಹೆಜ್ಜೆಗಳು ನೋಡೋದು, ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ. ಕೆಲಸ ಸೇರಿದ ಮೊದಲ ದಿನದಿಂದಲೂ ಕೆಲಸದಲ್ಲಿ ಖುಷಿ ಹುಡುಕಲು ಯತ್ನಿಸುತ್ತಿದ್ದೇನೆ.

ಸಮಯ ಸಿಕ್ಕಾಗ ಕನ್ನಡ ಸಾಹಿತ್ಯ ಓದೋದು.ತಲೆ ಕೆಟ್ಟಾಗ ಏನಾದ್ರು ಬರೆಯೋದು :-) ಬರವಣಿಗೆಗೆ ನಾನು ತುಂಬಾ ಹೊಸಬ. ಸುಮಾರು ಒಂದು ವರ್ಷದ ಹಿಂದೆ ಬರೆಯುವದಕ್ಕೆ ಶುರು ಮಾಡಿರಬಹುದು. ಎಡೆಬಿಡದೆ ತುಂಬಾ ಕಾಡುವ ವಿಷಯಗಳನ್ನ, ಸಂಗತಿಗಳನ್ನ ಬರವಣಿಗೆಯಿಂದ ತಣಿಸಿಕೊಳ್ಳುತ್ತೇನೆ. ನನ್ನ ಮುಂದಿನ ಎಲ್ಲಾ ಕೆಲಸಗಳು ಸ್ಥಗಿತವಾಗುವಷ್ಟು ಕಾಡಿದಾಗ ಮಾತ್ರ ಪೆನ್ನು ಕೈಗೆ ಹಿಡಿಯುತ್ತೇನೆ. ಸೋತು ಹಣ್ಣಾಗಿ ಬೇಜಾರಾಗಿ ಕುಳಿತಿರುವಾಗ ಒಮ್ಮೆ ಗೆಳೆಯರ ಬಲವಂತದಿಂದ ಹೊಗೆನಕಲ ಫಾಲ್ಸ್ ಗೆ ಹೋಗಿದ್ದೆ. ಅಲ್ಲಾದ ನನ್ನ ಮನಸಿನ ಬದಲಾವಣೆ, ನೋವಿಗೆ ಮುಕ್ತಿ ಸಿಕ್ಕ ರೀತಿಯ ಬಗ್ಗೆ ಒಂದು ಪ್ರವಾಸ ಕಥನದ ತರಹ ಬರೆದಿದ್ದು ನನ್ನ ಮೊದಲ ಬರಹ. ಅಲ್ಲಿಂದ ಒಂದೆರೆಡು ಕಥೆಯನ್ನ ಬರೆಯುವದಕ್ಕೆ ಆರಂಭಿಸಿದೆ. ಕೆಲಸದ ಒತ್ತಡದಲ್ಲಿ ಕಥೆ ಬರೆಯುವದಕ್ಕೆ ಸಮಯ ಕೊಡುವದು ಕಷ್ಟವಾಗುತ್ತ ಬಂತು, ಅದಕ್ಕೆ ಶಾರ್ಟ್ ಆಗಿ ಕವನ ಬರೆಯುವದಕ್ಕೆ ಶುರುಮಾಡಿದೆ.

ಜಗತ್ತಿನ ಶ್ರೇಷ್ಠ ಸಿನಿಮಾ ಓದೋದು,ನೋಡೋದು ಇಷ್ಟ. ಪುಟ್ಟಣ್ಣ ಕಣಗಾಲ್, ಕ್ರಿಸ್ಟೋಫರ್ ನೋಲನ್, ಅಕಿರಾ ಕುರಸವ ನೆಚ್ಚಿನ ನಿರ್ದೇಶಕರು. ಜಯಂತ್ ಕಾಯ್ಕಿಣಿ ನನ್ನ ನೆಚ್ಚಿನ ಲೇಖಕ. ಅವರ ಕಥಾಸಂಕಲನಗಳು ನನಗೆ ಗುರು ಸಮಾನ. ಅವರ ಕಥೆಗಳು ಸ್ಪಷ್ಟವಾಗಿ ಕಲ್ಪಿಸುವಷ್ಟು ನನ್ನನ್ನು ಆವರಿಸುತ್ತವೆ. ಅಲ್ಲಿನ ಪಾತ್ರಗಳು ಯಾವುದೋ ಒಂದು ಲೋಕಕ್ಕೆ ಕರೆದೊಯ್ದು ವಾಪಸ್ಸು ಬರುವ ದಾರಿ ಹೇಳದೆ ಮಾಯವಾಗುವಷ್ಟು ಕಾಡುತ್ತವೆ. ಇಲ್ಲಿಯವರೆಗೂ ನನಗೆ ತುಂಬಾ ಕೇಳಲ್ಪಟ್ಟಿರುವ ಪ್ರಶ್ನೆಯೆಂದರೆ 'tell about youself?'. ಎಲ್ಲಾ ಇಂಟರ್ವ್ಯೂ ಅಲ್ಲೂ ಇದು ಕಾಮನ್ ಪ್ರಶ್ನೆ. ಪ್ರತಿಸಲ ಮುಖ ಕೆಡಿಸಿಕೊಂಡೆ ಉತ್ತರಿಸಿದ ನನಗೆ ಇಂದು ಮೊದಲ ಬಾರಿಗೆ ನನ್ನ ಬಗ್ಗೆ ಹೇಳುವದಕ್ಕೆ ಖುಷಿಯಾಗುತ್ತಿದೆ.
ನನ್ನ ಬಗ್ಗೆ ನನಗೇ ಪರಿಚಯಿಸಿದ್ದಕ್ಕೆ ತುಂಬಾ ಧನ್ಯವಾದಗಳು.ನಿಮ್ಮ ಈ 'ಪ್ರಶ್ನೆ'ಗೆ ನಾನು ಚಿರ ಋಣಿ.

ಒಲುಮೆಯಿಂದ
ವಿಜಯಕುಮಾರ್ ಹೂಗಾರ್."

ಎಂದು ಮಾತು ಮುಗಿಸಿದ ಗೆಳೆಯ ವಿಜಯ್ ಬರೀ ಒಂದು ವರ್ಷದಿಂದ ತಮ್ಮ ಬರವಣಿಗೆಯನ್ನು ಶುರು ಮಾಡಿದ್ದಾರೆ ಎಂದರೆ ನಂಬಲಾಗದು. ಯಾಕೆಂದರೆ ಅವರ ಬರಹಗಳಲ್ಲಿರುವ ಪ್ರಬುದ್ಧತೆ ಎದ್ದು ಕಾಣುತ್ತೆ. ಅಂದ ಹಾಗೆ ಗೆಳೆಯ ವಿಜಯ್ ಅವರ ಬ್ಲಾಗಿನ ಲಿಂಕ್ ಈ ಕೆಳಗೆ ನೀಡಿರುವೆ. ಸಮಯವಿದ್ದಾಗ ಒಮ್ಮೆ ಕಣ್ಣಾಡಿಸಿ..
http://mukta-viji.blogspot.in/

ವಿಜಯ್ ಅವರ ಒಂದೆರಡು ಕವನಗಳ ಸಾಲುಗಳು ಇಗೋ ನಿಮಗಾಗಿ ಗೆಳೆಯರೇ..

ನೀ ಮುಟ್ಟಿ 
ಹೋದ ನೆಲಕ್ಕಿಂದು 
ಬಿಗುಮಾನ.
ಸೋಕಿದ ಮನಕ್ಕೆಲ್ಲ 
ಬಹುಮಾನ.
ನೆರಳು ತಾಗಿದ 
ಜಾಗಕ್ಕೆಲ್ಲ ಹೊಸ 
ಜೀವದಾನ.
*****
ಮಾನ್ಯ ಚಂದಿರನಿಗೊಂದು
ವಿನಮ್ರ ಮನವಿ

ನನ್ನಾಕೆಯ ಹಿಂಬಾಲಿಸಬೇಡ,
ಅವಳ ಏಕಾಂತ ಕದಿಯಲು
ಯತ್ನಿಸಬೇಡ,
ಹೀಗೊಮ್ಮೆ ಯತ್ನಿಸಿ 
ನನ್ನ ಏಕಾಂತ 
ಕಳೆದು ಕೊಂಡಿರುವೆ,
ವ್ಯರ್ಥ ಪ್ರಯತ್ನಕ್ಕೆ ಬಲಿಯಾಗಬೇಡ
ಸೂರ್ಯನ ಆಸ್ಥಾನಕ್ಕೆ ಕವಿಯಾಗಬೇಡ.
*****

ಮತ್ತೆ ಸಿಗೋಣ
ನಿಮ್ಮ ಪ್ರೀತಿಯ
ನಟರಾಜು :))

ಶುಕ್ರವಾರ, ನವೆಂಬರ್ 2, 2012


ಎಲೆ ಮರೆ ಕಾಯಿ 
"ನಾನು ನಂದು ಅನ್ನೋ ಸ್ವಾರ್ಥ ಬಿಟ್ಟು ನಿಂಗೆ ಕೆಟ್ಟದಾದ್ರೂ ಪರವಾಗಿಲ್ಲ ಬೇರೆಯವರಿಗೆ ಒಳ್ಳೆಯದಾಗಲಿ ಅನ್ನೋ ಒಳ್ಳೆ ಮನಸಿಟ್ಟು ಬೇರೆಯವರನ್ನ ನೋಡು. ವಿಕಾರವಾಗಿರೋದು ನನ್ನ ಮುಖ ಅಲ್ಲ ನಿನ್ನ ಮನಸ್ಸು. ಕೆಟ್ಟ ಮನಸಿಟ್ಟು ನೋಡುದ್ರೆ ಎಲ್ಲಾ ವಿಕಾರವಾಗೆ ಕಾಣ್ಸುತ್ತೆ. ಒಳ್ಳೆ ಮನಸಿಟ್ಟು ನೋಡು ಎಲ್ಲಾ ಸುಂದರವಾಗೇ ಕಾಣ್ಸುತ್ತೆ Idiot."

"ಈ open world ನಲ್ಲಿ ಕೆಟ್ಟ ಮನಸ್ಸು, ಮೋಸ,  ಸ್ವಾರ್ಥಗಳಿಂದ ಮನುಷ್ಯರು ಹೊಡೆದಾಡ್ತಾರೆ. ಅದೇ underworld ನಲ್ಲಿ ಮಚ್ಚು ಕತ್ತಿಗಳಿಂದ ಹೊಡೆದಾಡ್ತಾರೆ. ಆ  ಮಾನಸಿಕ ಯುದ್ದಕ್ಕಿಂತ ಈ ದೈಹಿಕ ಯುದ್ದಾನೆ ಮೇಲು."

ಮೇಲಿನ ಸಂಭಾಷಣೆಯ ಸಾಲುಗಳು ನಿಮಗೆ ನೆನಪಿದೆಯೋ ಇಲ್ಲವೋ ಗೊತ್ತಿಲ್ಲ ಆದರೆ "ಜನ ಚೇಂಜ್ ಕೇಳ್ತಾರೆ" ಅನ್ನೋ ಡೈಲಾಗ್ ನಿಮಗೆ ಖಂಡಿತಾ ನೆನಪಿರುತ್ತದೆ. ಹೌದು ನಮ್ಮ ಕನ್ನಡದ ಕುವರ ಉಪ್ಪಿಯವರ ಡೈಲಾಗ್ ಗಳು ಇವು. ಗೊತ್ತು ಗುರಿ ಇಲ್ಲದ ಯಾರೋ ಅನ್ಯ ಭಾಷೆಯ ನಿರ್ದೇಶಕರುಗಳ ಚಿತ್ರಗಳ ನೋಡಿ ಅವರಿಗೆ ಸಿಕ್ಕಾಪಟ್ಟೆ ಮರ್ಯಾದೆ ನೀಡೋ ನಾವು ನಮ್ಮದೇ ಕನ್ನಡದ ಪ್ರತಿಭೆಗಳನ್ನು ಕಂಡೂ ಕಾಣದಂತೆ ಇದ್ದು ಬಿಡುತ್ತೇವೆ. ನಮ್ಮ ಕನ್ನಡದ ಪ್ರತಿಭೆಗಳನ್ನು ಪ್ರಮೋಟ್ ಮಾಡಲು, ಅವರ ಕುರಿತು ಒಳ್ಳೆಯ ಮಾತನಾಡಲು ಹಿಂಜರಿದು ನವೆಂಬರ್ ಬಂತೆಂದರೆ ಕನ್ನಡ ಕನ್ನಡ ಎಂದು ಬೊಬ್ಬಿಡುತ್ತೇವೆ. ಒಂದೆರಡು ಹಿಟ್ ಚಿತ್ರಗಳನ್ನಷ್ಟೇ ನೀಡಿರುವ ನಿರ್ದೇಶಕರುಗಳಿಗೆ ಗ್ರೇಟ್ ಡೈರೆಕ್ಟರ್ ಅನ್ನೋ ಪಟ್ಟ ಕೊಡುವ ನಾವು ಹತ್ತಾರು ಹಿಟ್ ಚಿತ್ರಗಳನ್ನು ನೀಡಿರುವ ನಿರ್ದೇಶಕನಿಗೆ ಅವನ ಮಾತು ಒರಟು ಅನ್ನೋ ಕಾರಣಕ್ಕೆ ಬೇರೆಯದೇ ಹಣೆಪಟ್ಟೆ ಕಟ್ಟುಬಿಡುತ್ತೇವೆ.  ಉಪ್ಪಿ ಎಂದರೆ ಕೆಲವರಿಗೆ ಕನ್ನಡದ ಹೀರೋ ಎಂದಷ್ಟೇ ಗೊತ್ತಿದೆ. ಆದರೆ ಉಪ್ಪಿ, ಉತ್ತಮ ನಿರ್ದೇಶಕ, ಸಂಭಾಷಣೆಕಾರ, ಗೀತ ರಚನೆಕಾರ ಎಂಬ ವಿಷಯ ಎಷ್ಟು ಜನಕ್ಕೆ ಗೊತ್ತೋ ಗೊತ್ತಿಲ್ಲವೋ ತಿಳಿಯದು. ಉಪ್ಪಿಯ ಒಬ್ಬ ದೊಡ್ಡ ಅಭಿಮಾನಿಯಾಗಿ ತನ್ನ "ಉಪೇಂದ್ರ ಎಂಬ MODERN ವೇದಾಂತಿ !!" ಎಂಬ ಲೇಖನವೊಂದರಲ್ಲಿ ಉಪ್ಪಿಯ ಚಿತ್ರಗಳ ಸಂಭಾಷಣೆಯೊಂದಿಗೆ ಲೇಖನವನ್ನು ಶುರು ಮಾಡಿ ಉಪ್ಪಿಯನ್ನು ಚೆನ್ನಾಗಿ ವಿಶ್ಲೇಷಿಸಿರುವ ಗೆಳೆಯನ ಬ್ಲಾಗಿನ ಹೆಸರು ಅಂತರಂಗದ ಉವಾಚ.

ನಮ್ಮ ಮಾತುಗಳು ಬೆರೆತುಹೋದರೆ
ಮೂಡಿರುವ ಕುತೂಹಲ ಕಡಿಮೆಯಾಗಬಹುದು
ಮೌನದ ಮಜಾ ಮರೆಯಾಗಬಹುದು
ಅವಿತಿರುವ ಭಾವನೆಗಳಿಗೆ ಅರ್ಥ ಬಂದುಬಿಡಬಹುದು
ಆದರೆ,
ಈ ಮೌನ ಸಂಭಾಷಣೆ ಸಾಕಾಗಿದೆ ಗೆಳತಿ

ಮೇಲಿನ ಚಂದದ ಸಾಲುಗಳ ಬರೆದಿರುವ ಈ ಗೆಳೆಯ ಹೇಳುವಂತೆ ತಾನು ವೃತ್ತಿಯಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸದಲ್ಲಿದ್ದರೂ ಸಾಕಷ್ಟು ಪ್ರವೃತ್ತಿಗಳಲ್ಲಿ ಪಾಲ್ಗೊಳ್ಳಬೇಕೆಂಬ ಹಂಬಲದಿಂದ ಮನಸ್ಸಿಗೆ ತೋಚಿದ್ದನ್ನು  ಬ್ಲಾಗಿನಲ್ಲಿ ನೀರಾಳವಾಗಿ ಗೀಚಬಹುದು ಎಂಬ ಧೈರ್ಯದಿಂದ ಈ ಬ್ಲಾಗ್ ಮಾಡಿದ್ದಾರಂತೆ. ತನ್ನ ಪಿಯುಸಿ ಮತ್ತು ಇಂಜಿನಿಯರಿಂಗ್ ದಿನಗಳ ಕವಿತೆಗಳನ್ನು ಒಂದೆಡೆ ತನ್ನ ಬ್ಲಾಗಿನಲ್ಲಿ ಹಾಕಿರುವ ಗೆಳೆಯ ತಾನು ಭಾವುಕ ಎಂದು ಹೇಳಿಕೊಳ್ಳುತ್ತಲೇ ತನ್ನ ಸರಳ ಶೈಲಿಯಿಂದ ನಮ್ಮ ಮನ ಸೆಳೆಯುತ್ತಾರೆ. ಬ್ಲಾಗ್ ಲೋಕದಲ್ಲಿ ಗುರುತಿಸಿಕೊಳ್ಳುವುದು ಒಂದು ಕಲೆ. ಅಂತರ್ಜಾಲ ತಾಣದಲ್ಲಿ ತನ್ನ ಬ್ಲಾಗ್ ಲಿಂಕ್ ಅನ್ನು ಆಗಾಗ ಹಂಚಿಕೊಳ್ಳುವುದರ ಮೂಲಕ ಹೆಚ್ಚು ಹೆಚ್ಚು ಜನಗಳಿಗೆ ನಮ್ಮ ಬರಹಗಳು ತಲುಪಲು ಅನುಕೂಲವಾಗುತ್ತದೆ. ನಮ್ಮ ಲೇಖನಗಳನ್ನು ನಾವೇ ಇತರರೊಡನೆ ಹಂಚಿಕೊಳ್ಳದಿದ್ದರೆ ನಮ್ಮ ಬರಹಗಳು ಮತ್ತು ನಾವು ಎಲೆ ಮರೆ ಕಾಯಿಯಾಗಿಯೇ ಉಳಿದುಬಿಡುತ್ತೇವೆ. ಯಾವುದೋ ಕೆಲಸದ ಒತ್ತಡದಲ್ಲಿ ಇಲ್ಲವೇ ಪ್ರೋತ್ಸಾಹದ ಕೊರತೆಯಿಂದ ಬರಹಗಳನ್ನು ಬರೆಯುವುದನ್ನೇ ನಿಲ್ಲಿಸಿಬಿಡುವ ಅಪಾಯ ಬರಹಗಾರನಿಗೆ ಇರುತ್ತದೆ. ಅಂತಹ ಅಪಾಯಗಳಿಂದ ಈ ಗೆಳೆಯ ಪಾರಾಗಿ ತನ್ನ ಸಾಹಿತ್ಯ ಕೃಷಿಯಲ್ಲಿ ಇನ್ನೂ ಈ ಗೆಳೆಯ ಹೆಚ್ಚು ತೊಡಗಲಿ ಎಂಬುದು ಈ ಲೇಖನದ ಆಶಯ. ಅಂದ ಹಾಗೆ ಈ ಗೆಳೆಯನ ಬ್ಲಾಗಿನ ಉಪ ಶೀರ್ಷಿಕೆ ಎಲೆ ಮರೆ ಕಾಯಿ. ಈ ಎಲೆ ಮರೆ ಕಾಯಿ ಎಲೆ ಮರೆಯಲ್ಲೇ ಉಳಿಯದಿರಲಿ.. ಪಕ್ವವಾಗಿ ಹಣ್ಣಾಗಲಿ..

ಬರೆಯ ಹೊರಟರೇ ಬರೀ 
ಪ್ರಣಯದ ಕಲರವಗಳು 
ಮುಗಿಯದ ಪ್ರೇಮ ಪಲ್ಲವಿಗಳು 
ಹಿತ ನೀಡೋ ಚರಣಗಳು 
ಹಾಡಬೇಕಷ್ಟೇ, ಶೃತಿ ತಪ್ಪದೆ 
ಕೇಳುಗರ ಕಿವಿ ತಣಿಸಲು..!!!

ಎಂದು ಹಾಡುವ ಇಚ್ಚೆ ತೋರಿದ್ದ ಗೆಳೆಯ ಯಾಕೋ ತುಂಬಾ ಮೌನವಹಿಸಿದ ಹಾಗೆ ಕಾಣುತ್ತೆ. ಮೇಲೆ ಹೇಳಿದ ಹಾಗೆ ತನ್ನ ಬ್ಲಾಗಿನಲ್ಲಿ ಹೆಚ್ಚು ಲೇಖನಗಳನ್ನಾಗಲಿ ಕವನಗಳನ್ನಾಗಲಿ ಈ ಗೆಳೆಯ ಹಾಕಿಕೊಳ್ಳದಿದ್ದರೂ ಇವರ ಬರವಣಿಗೆಯಲ್ಲಿ ಒಂದು ಪ್ರಬುದ್ಧತೆ ಇದೆ ಎಂಬುದು ಎದ್ದು ಕಾಣುತ್ತದೆ. ಇವರಿಂದ ಮತ್ತಷ್ಟು ಲೇಖನಗಳು ಬರಹಗಳು ಕವನಗಳು ಬರಲಿ ಎಂದು ಹಾರೈಸುತ್ತಾ ಇವತ್ತಿನ ಎಲೆ ಮರೆ ಕಾಯಿಗಳ ಜೊತೆ ಮಾತುಕತೆಯ ಇಂದಿನ ಅತಿಥಿಯಾಗಿರುವ ಪ್ರದೀಪ್ ಲಿಂಗರಾಜಶೆಟ್ಟಿಯವರ ಕಿರು ಪರಿಚಯ ಅವರದೇ ಮಾತಿನಲ್ಲಿ ಗೆಳೆಯರೇ ಇಗೋ ನಿಮಗಾಗಿ..

ಪ್ರದೀಪ್ ಲಿಂಗರಾಜಶೆಟ್ಟಿ

"ನನ್ನ ಹೆಸರು ಪ್ರದೀಪ್ ಲಿಂಗರಾಜಶೆಟ್ಟಿ. ಹುಟ್ಟಿದ್ದು ತುಮಕೂರು ಜಿಲ್ಲೆಯ ಚೇಳೂರು ಎಂಬ ಗ್ರಾಮದಲ್ಲಿ. ಅಲ್ಲಿಯ ಸರ್ಕಾರಿ ಶಾಲೆಯಲ್ಲಿ ನನ್ನ ಪ್ರೌಢ ಶಿಕ್ಷಣ. ಪಿ.ಯು.ಸಿ. ಹಾಗೂ ಇಂಜಿನಿಯರಿಂಗ್ ಗಾಗಿ ಆಶ್ರಯಿಸಿದ್ದು ತುಮಕೂರನ್ನು. ಸುಮಾರು 4 ವರ್ಷಗಳಿಂದ ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ. ಪ್ರೌಢಶಾಲೆಯಲ್ಲಿ ಓದುತ್ತಿರುವಾಗ ಸಾಹಿತ್ಯದಲ್ಲಿ ತೊಡಗಿಕೊಳ್ಳಲು ಆಸಕ್ತಿ ಚಿಗುರಿತಾದರೂ, ಬರೆಯಲು ಶುರುವಿಟ್ಟಿದ್ದು ಪಿ.ಯು.ಸಿ. ಓದುವಾಗ. ನನ್ನ ಹಾಸ್ಟೆಲ್ ರೂಮ್ ಮೇಟ್ ಆಗಿದ್ದ ನಟರಾಜು ಎಂಬುವವರು ಬರೆಯುತಿದ್ದ ಕವನಗಳು ನಾನೂ ಸಾಹಿತ್ಯದಲ್ಲಿ ತೊಡಗಿಕೊಳ್ಳಲು ಪ್ರೇರೆಪಿಸಿದವು.

ನನಗೆ ಕನ್ನಡ ಸಾಹಿತ್ಯದ ಎಲ್ಲ ದಿಗ್ಗಜರ ರಚನೆಗಳು ಇಷ್ಟವಾಗುತ್ತವೆ. ಒಬ್ಬೊಬ್ಬ ಸಾಹಿತಿಯೂ ಒಂದೊದು ವಿಚಾರಕ್ಕೆ, ಅವರ ರಚನೆಯ ಶೈಲಿಗೆ ನನಗೆ ತುಂಬಾ ಇಷ್ಟವಾಗುತ್ತಾರೆ. ಹೆಚ್ಚು ಓದುವುದು ಆತ್ಮಕಥೆಗಳನ್ನು. ಪೂರ್ಣಚಂದ್ರ ತೇಜಸ್ವಿಯವರು ಹೇಳಿದಂತೆ ಸಾಹಿತ್ಯ ರಚನೆಯಲ್ಲಿ ವಿಜ್ಞಾನವನ್ನ ಅಳವಡಿಸಿಕೊಂಡಲ್ಲಿ ನಮ್ಮ ಕನ್ನಡ ಸಾಹಿತ್ಯ ಹೆಚ್ಚು ಪರಿಣಾಮಕಾರಿಯಾಗಿ, ಗುಣಮಟ್ಟದ್ದಾಗಿ ಹೊರಬರುತ್ತೆ ಎಂಬುದನ್ನು ಬಲವಾಗಿ ನಂಬುವವನು ನಾನು. ಕಾರಂತರ ವೈವಿಧ್ಯಮಯ ಬದುಕು ನನ್ನನ್ನು ಯಾವಾಗಲೂ ಬೆರಗುಗೊಳಿಸುತ್ತೆ. ಕನ್ನಡ ನನ್ನ ಮಾತೃ ಭಾಷೆ, ಮಾತನಾಡುವಾಗ, ಕನ್ನಡ ಓದುವಾಗ ಯಾವುದೇ ಭಾಷೆ ನೀಡದ ಸುಖವನ್ನು ಇದರಿಂದ ನಾನು ಪಡೆದಿದ್ದೇನೆ.

ಕನ್ನಡದಲ್ಲಿ ಬೇಕಾದಷ್ಟು ಸಾಹಿತ್ಯ ಪ್ರಕಾರಗಳಿವೆ. ದಿಗ್ಗಜರುಗಳು ರಚಿಸಿದ ಶ್ರೀಮಂತ ಸಾಹಿತ್ಯವಿದೆ. ಇದಕ್ಕೆ ಸಾಕ್ಷಿ ಭಾರತದಲ್ಲೇ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ಗೌರವ. ಅವುಗಳೆಲ್ಲವುಗಳ ಅಧ್ಯಯನ, ತಿಳಿಯದಿರುವವರಿಗೆ ಸಣ್ಣ ಮಾರ್ಗದರ್ಶನ ನನ್ನ ಕನಸು.
ಧನ್ಯವಾದಗಳೊಂದಿಗೆ,
ನಿಮ್ಮ ಪ್ರದೀಪ್"

ಅತಿ ಚಿಕ್ಕದಾಗಿ ಚೊಕ್ಕವಾಗಿ ತನ್ನ ಪರಿಚಯ ಮಾಡಿಕೊಂಡ ಗೆಳೆಯ ಪ್ರದೀಪ್ ರವರ ಪರಿಚಯ ನಿಮಗೆ ಇಷ್ಟವಾಯಿತು ಎಂದುಕೊಳ್ಳುವೆ ಗೆಳೆಯರೇ.. ಪ್ರದೀಪ್ ರವರ ಬ್ಲಾಗಿನ ಲಿಂಕ್ ಈ ಕೆಳಗೆ ನೀಡಿರುವೆ ಅವರ ಬ್ಲಾಗಿನ ಮೇಲೆ ಸಮಯವಿದ್ದಾಗ ಕಣ್ಣಾಡಿಸಿ..
http://antharangadaaavaacha.blogspot.in/

ಗೆಳೆಯ ಪ್ರದೀಪ್ ರವರ ಬರಹಗಳ ಒಂದೆರಡು ತುಣುಕುಗಳನ್ನು ನಿಮಗಾಗಿ ನೀಡಿರುವೆ ಖುಷಿಯಿಂದ ಓದಿಕೊಳ್ಳಿ....

ಅಮ್ಮನ ಅಕ್ಕರೆಯ ಮಡಿಲಿನಲ್ಲಿ ಮಲಗಿ ಪಡೆದ ಸುಖ, ಅಪ್ಪನ ಜೊತೆ ತೊಡಗಿ ಮುಳುಗಿಹೋದ ಸ್ನೇಹಭರಿತ ಚರ್ಚೆಗಳು ನೀಡೋ ತಿಳುವಳಿಕೆ, ಒಡಹುಟ್ಟಿದವರೊಡನೆ ಕಿತ್ತಾಡಿ, ಗುದ್ದಾಡಿ ಹಲವನ್ನ ನಮ್ಮದಾಗಿಸಿಕೊಂಡ ಕ್ಷಣಗಳು, ನೆರೆಹೊರೆಯವರಲ್ಲಿ ಬೆರೆತುಹೊದಾಗ ಎಲ್ಲರೂ ನಮ್ಮವರು ಎಂದು ಮೂಡುವ ಭಾವನೆಗಳು, ಯಾರ ಜೀವನದಲ್ಲಿ ಸಂಭವಿಸುವುದಿಲ್ಲವೋ ಅವರದೊಂದು ಅಪೂರ್ಣ ಜೀವನವೇ ಸರಿ.
*****
ಚದುರಿದ ಮೋಡಗಳು ಒಟ್ಟಾಗುವುದು 
ಇಳೆಗೆ ಮಳೆ ತರಲು ತಾನೇ 
ಋತುಮಾನಕೆ ತಲೆದೂಗಿ ಎಲೆಗಳುದುರುವುದು
ಹೊಸ ಚಿಗುರು ಬಯಸಿ ತಾನೇ
ಕಲ್ಪನೆಗೆ ನಿಲುಕಿದ ಒಡನಾಡಿ ಸಿಕ್ಕಾಗ
ಮನ ಸೋಲುವುದು ಸಹಜ ತಾನೇ..!!!
*****
ಭಾಷೆ ವಿಶೇಷ ರೂಪ  ತಾಳದು 
ಭಾವನೆಗಳು ಬೆಂಬಲಕ್ಕಿಲ್ಲದಿದ್ದರೆ 
ಭಾವನೆಗಳು ಬರಹವಾಗವು 
ವಿಷಯಗಳು ದೊರಕದಿದ್ದರೆ 
ವಿಷಯಗಳು ತಲುಪುವುದೇ ಇಲ್ಲ 
ಪಕ್ವ ಅನುಭವವಿರದಿದ್ದರೆ 
ಅನುಭವಿಸಿ ಬರೆದ  ಬರಹಕೆ ಬೆಲೆ ಬೆಲೆ ಬಾರದು 
ಆನಂದಿಸುವ, ಆಸ್ವಾದಿಸುವ ಮನಸುಗಳಿರದಿದ್ದರೆ..!!!

ಮತ್ತೆ ಸಿಗೋಣ
ಪ್ರೀತಿಯಿಂದ
ನಟರಾಜು :))