ಗುರುವಾರ, ಸೆಪ್ಟೆಂಬರ್ 27, 2012


ಎಲೆ ಮರೆ ಕಾಯಿ  ೫೮
ತಂದೆ ತಾಯಿಯರ ಮನೆಯ ತೊರೆದು
ಅಣ್ಣ ತಂಗಿಯ ಸ್ನೇಹ ಮರೆತು
ನಂಬಿ ನಿನ್ನಂಗಳಕೆ ಬಂದಿಹಳು
ತನ್ನ ಪ್ರೀತಿ ಎಲ್ಲಾ ನಿನಗೆರೆದು
ನಿನ್ನ ಕೊಂಚ ವಾತ್ಸಲ್ಯವ ಬಯಸಿಹಳು
ಏಕೆ ತಿಳಿಯದಾಗಿದೆ ನಿನಗೆ .., ಅವಳ ಕೂಗು? 

ಕೆಲವರು ಬೆಳಿಗ್ಗೆ ಎದ್ದು ರೆಡಿಯಾಗಿ ಮೈಗೆ ಬಟ್ಟೆಯನ್ನು ಹೊಟ್ಟೆಗೆ ತಿಂಡಿಯನ್ನು ಆತುರಾತುರವಾಗಿ ತುರುಕಿ ಹೊರಟರೆಂದರೆ ಮತ್ತೆ ರಾತ್ರಿಯವರೆಗೂ ಮನೆಯ ಕಡೆ ಮುಖ ಮಾಡುವುದಿರಲಿ ಮನೆಯಲ್ಲಿರುವ ಮಡದಿಗೋ ಮಕ್ಕಳಿಗೋ ಒಂದು ಫೋನ್ ಸಹ ಮಾಡುವುದಿಲ್ಲ. ರಾತ್ರಿ ಮನೆಗೆ ಬಂತೆಂದರೆ ಮತ್ತೆ ಆಫೀಸಿನ ಟೆನ್ಷನ್ ಗಳನ್ನು ತಲೆಯಲ್ಲಿ ತುಂಬಿಕೊಂಡು ದುಡಿದಿದ್ದಕ್ಕಿಂತ ಹೆಚ್ಚು ದಣಿದು ಮತ್ತೆ ಬೆಳಿಗ್ಗೆ ಎದ್ದು ಆಫೀಸಿಗೆ ಓಡಿಬಿಡುವ ಯೋಚನೆಯಲ್ಲೇ ನಿದ್ದೆಗೆ ಜಾರಿಬಿಡುತ್ತಾರೆ. ಆಫೀಸಿಗೆ ಹೋದ ಮೇಲೆ ಒಂದೇ ಒಂದು ಸಲ ಫೋನ್ ಮಾಡಿ ಊಟ ಮಾಡಿದೆಯಾ ಏನ್ ಮಾಡ್ತಾ ಇದ್ದೀಯ ಎಂದು ಪ್ರೀತಿಯಿಂದ ಮಾತನಾಡಿಸಿದರೆ ಸಾಕು, ಮನೆಗೆ ಬಂದ ಮೇಲೆ ಕಾಫಿಯನ್ನೋ, ಚಹಾವನ್ನೋ ಹೀರುತ್ತಾ ಒಂದಷ್ಟು ಹೊತ್ತು ಜೊತೆಯಲ್ಲಿ ಸಮಯ ಕಳೆದರೆ ಸಾಕು ಎಂದುಕೊಳ್ಳುತ್ತಾ ಇಂತಹ ಸಣ್ಣ ಪುಟ್ಟ ಆಸೆಗಳ ಮನದಲ್ಲಿ ತುಂಬಿಕೊಂಡು, ಅಂತಹ ಆಸೆಗಳು ನಿರಾಸೆಯಾದಾಗ ಇಂತಹವನನ್ನು ಕಟ್ಟಿಕೊಂಡು ತಪ್ಪು ಮಾಡಿದೆ ಎಂದು ಬೈದುಕೊಂಡು ಬದುಕುವ ಹೆಣ್ಣು ಮಕ್ಕಳು ಈ ಪ್ರಪಂಚದಲ್ಲಿ ಅಸಂಖ್ಯ. ಅಂತಹವರಲ್ಲಿ ಅನೇಕರ ಪಾಲಿಗೆ ತನ್ನ ಸಂಗಾತಿಯ ಜೊತೆಯಲ್ಲಿ ಊಟ ಮಾಡೋದು, ರಸ್ತೆಯಲ್ಲಿ ಕೈ ಕೈ ಹಿಡಿದು ನಡೆಯುವುದು ಸಹ ಒಂದು ಕನಸಾಗಿರುತ್ತದೆ. ಇದಕ್ಕೆ ವಿರುದ್ಧವೆಂಬಂತೆ ಮನೆಗೆ ಬೇಕಾಗಿರುವುದು ಹಣ, ತನ್ನ ಆಫೀಸ್ ತನ್ನ ಸರ್ವಸ್ವ, ಹೆಣ್ಣು ಬಯಸುವುದು ಚಿನ್ನ, ಬೆಳ್ಳಿ, ರೇಶ್ಮೆ ಸೀರೆ ಎಂದು ತಪ್ಪಾಗಿ ತಿಳಿದುಕೊಂಡವರಂತೆ ದಿನ ನಿತ್ಯದ ಖರ್ಚಿಗೆಂದು, ಹಬ್ಬ ಹರಿದಿನಗಳಲಿ ಶಾಪಿಂಗ್ ಗೆ ಎಂದು ಒಂದಷ್ಟು ದುಡ್ಡು ಕೊಟ್ಟು ಬಾಳ ಸಂಗಾತಿ ಎನಿಸಿಕೊಂಡವನಾದ ತನ್ನ ಕರ್ತವ್ಯ ಮುಗಿಯಿತು ಎಂದುಕೊಳ್ಳುವವರು ಕೊನೆಗೆ ಮನೆಯಲ್ಲಿ ಜಗಳಗಳಾದ ತತ್ವಜ್ಞಾನಿಗಳಂತೆ ಹೆಣ್ಣನ್ನು ಅರ್ಥಮಾಡಿಕೊಳ್ಳೋದು ಕಷ್ಟ ಎಂದುಬಿಡುತ್ತಾರೆ. ಯಾರೂ ಬಯ್ಯುಕೋಬೇಡಿ. :))  ಇಂತಹ ಸೂಕ್ಷ್ಮ ವಿಚಾರ ಮೇಲ್ನೋಟಕ್ಕೆ ಚರ್ಚಾಸ್ಪದ ವಿಷಯವಾಗಿ ಕಂಡರೂ ಒಮ್ಮೆ ಚಿಂತಿಸಬೇಕಾದ ವಿಷಯ ಕೂಡ ಆಗಿರುತ್ತದೆ. ಮೇಲಿನ ಕವಿತೆಯ ಸಾಲನ್ನು ಓದುತ್ತಲೇ ಹೀಗೊಂದು ಭಾವನಾಲಹರಿ ಹರಿಯುತ್ತಾ ಹೋಯಿತು. ಅಂದ ಹಾಗೆ ಈ ಕವಿತೆ ನನ್ನ ಕಣ್ಣಿಗೆ ಬಿದ್ದದ್ದು ಭಾವಪ್ರಿಯ ಎಂಬ ಬ್ಲಾಗಿನಲ್ಲಿ..

ಯಾಕೋ ಇಂದಿಂದು ಕನಸುಗಳದೇ ಕಾರುಬಾರು 
ಇರುಳ ತೋಳಲಿ ನಿದ್ದೆಗೆ ಜಾರುತಲಿ 
ಲಗ್ಗೆ ಇಡುವವು ಮುಖಗಳು ಸಾವಿರಾರು ..

ಮುಖ ಪರಿಚಯವೇ ಇಲ್ಲದ ಮುಖಗಳು 
ನಸು ನಕ್ಕು ಶೂನ್ಯದಡೆಗೆ ಜಾರಿದರು 
ತಿರುಗಿ ನೋಡಿದೊಡನೆ ಅಲ್ಯಾರೂ ಇಹರು 

ಇಂತಹ ಚಂದದ ಸಾಲುಗಳ ಈ ಕವಿ ಗೆಳೆಯ ನಮ್ಮ ಮುಂದೆ ಇಟ್ಟಾಗ ಎಷ್ಟೊಂದು ಮುಖಗಳು ಸುಮ್ಮನೆ ಕಣ್ಣ ಮುಂದೆ ಬಂದು ಹೋದಂತೆ ಭಾಸವಾಗುತ್ತದೆ. ಈ ಕವಿ ಗೆಳೆಯ ಮೊದಲಿಗೆ ಒಬ್ಬ ಒಳ್ಳೆಯ ಓದುಗ ಎನ್ನಬಹುದು. ತಾನು ಓದುವ ಪ್ರತಿ ಕವನ ಮತ್ತ ಬರಹಗಳಿಗೆ ಮೆಚ್ಚುಗೆಯ ಟಿಪ್ಪಣಿ ಬರೆಯುವುದ ಕಂಡರೆ ಇವರಲ್ಲಿರುವ ಓದುಗನಿಗೆ ಒಂದು ಸಲಾಮು ಹೊಡೆಯಬೇಕು ಎನಿಸುತ್ತದೆ. ಇವರ ಕವನಗಳ ಮೇಲೆ ಒಮ್ಮೆ ಕಣ್ಣಾಡಿಸಿದರೆ ಅವು ಪ್ರಬುದ್ದತೆ ಪಡೆಯಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಿವೆ ಎಂದೆನಿಸಿದರೂ ಬರೆಯುತ್ತ ಬರೆಯುತ್ತಲೇ ಚಂದದ ಕವಿಯಾಗುವತ್ತ ಹೆಜ್ಜೆಯಿಟ್ಟಿರುವ ಈ ಕವಿ ಗೆಳೆಯನ ಕವಿತೆಗಳು ಪಕ್ವತೆಯತ್ತ ಹೊರಳುತ್ತಿರುವುದು ಅಲ್ಲಲ್ಲಿ ಕಣ್ಣಿಗೆ ಎದ್ದು ಕಾಣುತ್ತವೆ ಸಹ. ಈ ಗೆಳೆಯನ ಒಳಗೆ ಉತ್ತರ ಕರ್ನಾಟಕದ ದೇಶೀ ಸೊಗಡು ಸುಮ್ಮನೆ ಮರೆ ಮಾಚಿ ಕುಳಿತಿದೆ ಎನಿಸುತ್ತದೆ. ಧಾರವಾಡದ ಭಾಷೆಯ ಗಮ್ಮತ್ತನ್ನು ಕವಿತೆಗಳ ಬರಹಗಳ ರೂಪದಲ್ಲಿ ನಮಗೆ ನೀಡುವಂತೆ ಈ ಗೆಳೆಯನಿಗೆ ಒಂದು ಮನವಿ. ಅವರು ಉತ್ತರ ಕರ್ನಾಟಕದ ಕನ್ನಡದಲ್ಲಿ ಬರೆದಿರೋ ಒಂದು ಮುದ್ದಾದ ಸರಳ ಕವಿತೆಯ ಸಾಲು ಇಗೋ ನಿಮಗಾಗಿ...

ಸೀರಿ ಉಡಾಕ ಅಕೀಗ ಬರಬೇಕು
ಹಣಿಯಾಗ ಬೊಟ್ಟಿಡಬೇಕು
ತಲಿತುಂಬಾ ಹೂ ಮುಡಿದಿರಬೇಕು
ತಳಕು ಬಳುಕೋ ನಾಚುವ ಬಳ್ಳಿಯಾಗಿರಬೇಕು
ರೊಟ್ಟಿ ಮಾಡಕ ಬರಬೇಕು
ಮನೀನು ಸ್ವಚ್ಛಗ ಇಡಬೇಕು

ಇಷ್ಟವಾಯಿತಾ ಸಹೃದಯಿಗಳೇ ಈ ಗೆಳೆಯನ ಕವಿತೆಯ ಸಾಲುಗಳು. ಕನ್ನಡ, ಇಂಗ್ಲೀಷ್, ಹಿಂದಿ ಈ ಮೂರೂ ಭಾಷೆಗಳಲ್ಲೂ ಸಾಹಿತ್ಯ ಕೃಷಿ ಮಾಡುವ ಸಾಹಸ ಮಾಡತ್ತಿರುವ ಈ ಗೆಳೆಯ ತನ್ನ ವಿಷಯ ವಸ್ತುಗಳ ವಿಸ್ತಾರವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲಿ ಎಂದು ಹಾರೈಸುತ್ತಾ ಇವತ್ತಿನ ಎಲೆ ಮರೆ ಕಾಯಿಯ ವಿಶೇಷ ಅತಿಥಿ ಸುನಿಲ್ ರಾಮಕೃಷ್ಣ ಅಗಡಿ ಚಿಕ್ಕದಾಗಿ ಹೇಳಬೇಕೆಂದರೆ ಸುನಿಲ್ ಅಗಡಿಯವರ ಜೊತೆ ನಡೆಸಿದ ಮಾತುಕತೆಯ ತುಣುಕುಗಳು ಸಹೃದಯಿಗಳೇ ಇಗೋ ನಿಮಗಾಗಿ...

ಸುನಿಲ್ ರಾಮಕೃಷ್ಣ ಅಗಡಿ

"ನನ್ನ ಹುಟ್ಟು ಊರು "ಧಾರವಾಡ " ಪ್ರಖ್ಯಾತ ಕವಿಗಳಾದ ವರಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಹುಟ್ಟಿ, ಬೆಳೆದ, ಕವನಗಳ ರಚಿಸಿದ ನೆಲ. ಹವಾಮಾನ ಅನುಕೂಲಕರವಾಗಿದ್ದು ಯಾವಾಗಲು ಹಸಿರು ವನಸಿರಿಯಿಂದ ಕಂಗೊಳಿಸುತ್ತಿರುತ್ತದೆ. ಇಲ್ಲಿಯ ಬಾಬು ಸಿಂಗ್ ಪೇಡ ಅಥವಾ ಧಾರವಾಡ ಲೈನ್ ಬಜಾರ್ ಪೇಡ ಜಗತ್ ಪ್ರಖ್ಯಾತಿಯನ್ನು ಪಡೆದಿದೆ. ಧಾರವಾಡ ಭಾರತೀಯ ಸಂಸ್ಕೃತಿ ಬಿಂಬಿಸುವ ಸಾಹಿತ್ಯ, ಶಾಸ್ತ್ರಿಯ ಸಂಗೀತ ಹಾಗು ವಿದ್ಯಾಭ್ಯಾಸಕ್ಕೆ ಖ್ಯಾತಿಯನ್ನು ಪಡೆದ ಕರ್ನಾಟಕ ವಿಶ್ವವಿದ್ಯಾನಿಲಯ ಒಳಗೊಂಡಿದೆ. ವೀರ ರಾಣಿ ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಮತ್ತೆ ಮುಂತಾದವರು ಹೋರಾಡಿದ ಐತಿಹಾಸಿಕತೆ ನಮ್ಮ ಈ ನಾಡಿಗಿದೆ.

ನಾನು ಚಿಕ್ಕವನಿದ್ದಾಗಿನಿಂದಲೂ ಕನ್ನಡ ಬರೆಯುವುದಲ್ಲಿ ಸ್ವಲ್ಪ ಮಂದ ಸ್ವಭಾವ, ಹೀಗೊಂದು ರೂಢಿಯನ್ನು ಬೆಳೆಸಿಕೊಳ್ಳುತ್ತೇನೆ ಎಂದೂ ನಂಬಿರಲಿಲ್ಲ, ಇರಲಿ ನನ್ನ ಕವನಗಳ ಬರಿಯುವ ಹವ್ಯಾಸ ಶುರುವಾಗಿದ್ದು ೨೨-೦೩-೨೦೦೨ ರಿಂದ, ನಾನು ಅಭಿಯಂತರ ಪದವಿಯ ಅಭಾಸ ಮಾಡುತ್ತಿರುವಾಗ. ಸಹಜವಾಗಿಯೇ ನನ್ನ ಜೀವನದಲ್ಲಿ ಬಂದು ಹೋಗುವ ವಿಷಯಗಳ ಮೇಲೆ, ವ್ಯಕ್ತಿಗಳ ಮೇಲೆ, ನಿಸರ್ಗದ ಮೇಲೆ, ನನ್ನ ಅಚ್ಚುಮೆಚ್ಚಿನ ಸ್ನೇಹಿತರ ಮೇಲೆ ಅವರ ಸ್ವಭಾವಗಳನ್ನ ಗಣನೆಗೆ ತೆಗೆದುಕೊಂಡು ಬರೆಯಲಾರಂಬಿಸಿದೆ. ಹೂವುಗಳು ಎಂದರೆ ನನಗೆ ತುಂಬಾನೇ ಇಷ್ಟ. ನಾನು ಬರೆದ ಮೊದಲ ಕವನ,

"ಹೂವ ನನ್ನ ಜೀವ "
ಚೈತ್ರದ ಮುಂಜಾವಿನಲ್ಲಿ ಅರಳಿ,
ಇಬ್ಬನಿಯ ಹನಿಗಳ ಚೆಲ್ಲಿ,
ತಿಳಿಯ ಕಂಪನ್ನು ಸೂಸುತ,
ಎಳೆಯ ಬಿಸಿಲಲ್ಲಿ ನಗುತ್ತ,
ನೋಡುಗರ ಮನಸನ್ನು ಸೆಳೆಯುತ್ತಾ...
ಈ ಸೊಬಗನ್ನು ಕಂಡ ನಾನೇ ಧನ್ಯ ..!

ಹಬ್ಬದ ಸಂದರ್ಭದಲ್ಲಿ ಬರೆದ ಒಂದು ಕವನವು "ರಾಯಚೂರು ವಾಣಿ " ೨೦೦೨ ದೀಪಾವಳಿಯ ವಿಶೇಷಾಂಕದಲ್ಲಿ ಪತ್ರಿಕೆಯಲ್ಲಿ ಪ್ರಕಟವಾಗಿತ್ತು . ಆ ಕವನ ಈ ಕೆಳಗಿನಂತಿದೆ ..

" ದೀಪಾವಳಿ "
ಮತ್ತೆ ಬಂತು ದೀಪಾವಳಿ
ಜೀವನದ ಕತ್ತಲನ್ನು ಓಡಿಸುತ್ತಾ
ಜನರ ಭಾಗ್ಯ ಬೆಳಗಿಸುತ್ತ
ಎಲ್ಲೆಲ್ಲೂ ಸಂತೋಷದ ಅಲೆ ಎಬ್ಬಿಸುತ್ತ....ಬಂತು ದೀಪಾವಳಿ.
ಮತ್ತೆ ಬಂತು ದೀಪಾವಳಿ

ತುಂಬುತ್ತ ರಂಗು ರಂಗಿನ ಹೋಳಿ
ಬೀದಿಯಲೆಲ್ಲಾ ಪಟಾಕಿಗಳ ಹಾವಳಿ
ಹರಡುತ್ತಾ ಸಂಭ್ರಮದ ಧೂಳಿ ...ಬಂತು ದೀಪಾವಳಿ
ಮತ್ತೆ ಬಂತು ದೀಪಾವಳಿ

ಬಡವನ ಮನೆಯಲ್ಲಿ ಮಣ್ಣಿನ ಹಣತೆ
ಸಿರಿವಂತನ ಅರಮನೆಯಲ್ಲಿ ಬೆಳ್ಳಿಯ ಹಣತೆ
ಯಾವ ಹಣತೆಯಾದರೇನು ಎಲ್ಲದರಲ್ಲೂ ದೀಪದ ಬೆಳಕೇ ...ಬಂತು ದೀಪಾವಳಿ
ಮತ್ತೆ ಬಂತು ದೀಪಾವಳಿ

ಎಲ್ಲೆಲ್ಲಾ ಚೆಲ್ಲುತ್ತ ಬೆಳಕು
ಕಿನ್ನರಲ್ಲಿ ಹುಟ್ಟಿಸುತ್ತಾ ನಡುಕು
ಎಲ್ಲರ ಮುಖದಲ್ಲಿ ನಗೆಯ ಹೊಳಪು
ಎಲ್ಲೆಲ್ಲೂ ಚಿಮ್ಮುತ್ತ ಆನಂದದ ಹೊನಲು .

ಹೀಗೆ ಬರೆಯುತ್ತಾ ಬರೆಯುತ್ತಾ ಹೆಚ್ಚು ಹೆಚ್ಚೆಚ್ಚು ಬರೆಯುತ್ತಾ ಹೋದೆ. ಕವನಗಳು ನನ್ನ ಮನಸಿನ ಭಾವನೆಗಳನ್ನ ಭಿನ್ನಹಿಸುವ ಮಾಧ್ಯಮವಾಯಿತು, ಆದ ಕಾರಣದಿಂದನೆ ನಾನು "ಭಾವಪ್ರಿಯ" ಭಾವನೆಗಳನ್ನ ಪ್ರೀತಿಸುವವನು ಎಂದರ್ಥ.

ಇನ್ನು ಸಾಹಿತ್ಯದ ಬಗ್ಗೆ ಹೆಚ್ಚು ತಿಳಿದವನಲ್ಲ, ಸುಮ್ಮನೆ ಮನಸಿನ ಭಾವನೆಗಳನ್ನ ಗೀಚುತ್ತ ಹೋದಂತೆ ಗೆಳೆಯರು ಚೆನ್ನಾಗಿದೆ ಹೀಗೆ ಮುಂದುವರೆಸು ಎಂದು ಪ್ರೋತ್ಸಾಹಿಸಿದರು ಹಾಗೆ ಮುಂದುವರೆಸಿದ್ದೇನೆ, ಹೆಚ್ಚು ಓದುವ ಹವ್ಯಾಸವು ಇಲ್ಲಾ ಆದರೆ ಕನ್ನಡ ಬ್ಲಾಗಿನಲ್ಲಿ ಗೆಳೆಯರು ಹಂಚಿಕೊಳ್ಳುವ ಕತೆ ಕವನಗಳನ್ನ ಓದುತ್ತೇನೆ. ಕನ್ನಡದ ಅಭಿಮಾನವೇ ನನಗೆ ಬರೆಯುವಂತೆ ಪ್ರೇರೇಪಿಸುತ್ತದೆ. ಸಾಹಿತ್ಯದ ಕೃಷಿ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಆಸಕ್ತಿ ಇದೆ ಆದರೆ ನೀವುಗಳೇ ದಾರಿ ತೋರಬೇಕು. ಸಾಹಿತ್ಯ ಕೃಷಿಯ ಕನಸ್ಸೆಂದರೆ ಎಂದಾದರೂ ಒಂದು ದಿನ ಚಲನ ಚಿತ್ರಗಳಿಗೆ ಹಾಡುಗಳು ಬರೆಯಬೇಕು...ಜಯಂತ್ ಕಾಯ್ಕಿಣಿ .., ಯೋಗರಾಜ್ ಭಟ್ಟ ರಂತೆ ಹೆಸರು ಪಡೆಯಬೇಕು ಅನ್ನುವುದು ಒಂದು ಮಹದಾಸೆ ನನ್ನದು. ನನ್ನ ಕವನಗಳು ಬಹಳಷ್ಟು ಹಾಡುಗಳು ಇದ್ದ ಹಾಗೆ ಇರುತ್ತವೆ ಅದಕ್ಕೆ ನೀನು ಯಾಕೆ ಚಲನ ಚಿತ್ರಗಳಿಗೆ ಹಾಡುಗಳು ಬರೆಯಬಾರದು ಎಂದು ಸ್ನೇಹಿತರು ಕೇಳುತ್ತಿರುತ್ತಾರೆ.

ವೃತ್ತಿಯಲ್ಲಿ ನಾನು ಮೆಕ್ಯಾನಿಕಲ್ ಅಭಿಯಂತರ, ಕಳೆದು ೬ ವರ್ಷಗಳಿಂದ ಜನರಲ್ ಮೋಟೊರ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ, ಇದಕ್ಕೂ ಮುಂಚೆ ೩ ವರ್ಷ ಕೈನೆಟಿಕ್ ಕಂಪನಿಯಲ್ಲಿ ಅಹಮದ್ ನಗರ್, ಮಹಾರಾಷ್ಟ್ರದಲ್ಲಿ ಉದ್ಯೋಗ ಮಾಡುತ್ತಿದ್ದೆ. ವೃತ್ತಿ ಜೀವನ ಹೀಗೆ ಸಾಗಿದೆ.

ನನ್ನ ಕವನಗಳನ್ನ ಓದಿದ ಗೆಳೆಯರೊಬ್ಬರು ನನಗೆ ಕನ್ನಡ ಬ್ಲಾಗ್ ಪರಿಚಯ ಮಾಡಿಸಿದರು, ಸ್ವಲ್ಪ ದಿನ ಎಲ್ಲರೂ ಹಂಚಿಕೊಳ್ಳುವ ಬರಹಗಳನ್ನ ಇಲ್ಲಿ ಓದುತ್ತಿದ್ದೆ, ಕವಿ ಗೆಳೆಯರು ಓದಿ ಮೆಚ್ಚಿಕೊಂಡು ತಮ್ಮ ಅನಿಸಿಕೆಗಳನ್ನ ಹಂಚಿಕೊಳ್ಳುವುದು ತುಂಬಾನೇ ಖುಷಿ ಕೊಟ್ಟಿತು, ನನ್ನ ಕವನಗಳನ್ನ ಹಂಚಿಕೊಳ್ಳಲು ಹಾಗು ಪ್ರತಿಯಾಗಿ ಕವನಗಳ ಗುಣಮಟ್ಟ ಹೆಚ್ಚಿಸಿಕೊಳ್ಳಲು, ಸಾಹಿತ್ಯದಲ್ಲಿ ಬೆಳೆಯಲು ಕೂಡ ಸಹಾಯ ಆಗುತ್ತಿದೆ, ಅಲ್ಲದೆ ಕನ್ನಡವ ಉಳಿಸಿ ಬೆಳೆಸಲು ನಮ್ಮ ಕನ್ನಡದ ಬ್ಲಾಗು ಮಾಡುತ್ತಿರುವ ಕೆಲಸ ಶ್ಲಾಘನೀಯ. ಇನ್ನು ಹೆಚ್ಚು ಮರಿ ಕವಿಗಳಿಗೆ ಈ ವೇದಿಕೆ ದಾರಿ ದೀಪವಾಗಲಿ. ಕನ್ನಡ ಬ್ಲಾಗನ್ನು ಹುಟ್ಟು ಹಾಕಿದ ಎಲ್ಲಾರಿಗೂ, ನಡೆಸಿ ಬೆಳೆಸಿಕೊಂಡು ಹೋಗುತ್ತಿರುವ ಎಲ್ಲ ಹಿರಿಯ ಕವಿಗಳಿಗೂ ಹೃತ್ಪೂರ್ವಕ ಅಭಿನಂದನೆಗಳನ್ನ ಸಲ್ಲಿಸುತ್ತೇನೆ. ನಟರಾಜು ನಿಮ್ಮ ಕವಿ ಪರಿಚಯದ ಲೇಖನಗಳು ತುಂಬಾ ಚೆನ್ನಾಗಿ ಮೂಡಿಬರುತ್ತಿವೆ, ಕನ್ನಡ ಬ್ಲಾಗ್ ಕವಿಗಳನ್ನ ಪರಿಚಯಿಸುವ ನಿಮ್ಮ ಪ್ರಯತ್ನ ಮೆಚ್ಚಲೇ ಬೇಕು. ತಮಗೂ ಸಹ ಅಭಿನಂದನೆಗಳು."

ಎಂದು ಮಾತು ಮುಗಿಸಿದ ಗೆಳೆಯ ಸುನಿಲ್ ರವರ ಮಾತುಗಳು ನಿಮಗೆ ಇಷ್ಟವಾಯಿತು ಎಂದುಕೊಳ್ಳುವೆ ಗೆಳೆಯರೇ.. ಅವರ ಬ್ಲಾಗಿನ ಲಿಂಕ್ ಈ ಕೆಳಗೆ ನೀಡಿರುವೆ.. ಸಮಯವಿದ್ದಾಗ ಒಮ್ಮೆ ಕಣ್ಣಾಡಿಸಿ..
http://bhavapriya.blogspot.in/

ಗೆಳೆಯ ಸುನಿಲ್ ರವರ ಕವನಗಳ ಒಂದೆರಡು ಕವನಗಳ ಸಾಲುಗಳ ನಿಮಗಾಗಿ ನೀಡಿರುವೆ ಖುಷಿಯಿಂದ ಓದಿಕೊಳ್ಳಿ ಗೆಳೆಯರೇ..

ಅಕ್ಕ ಪಕ್ಕದ ಮನೆಯ ಜೋಡಿ ಹಕ್ಕಿ
ಯಾರ ಹುಡುಕುವೆ ಹೆಕ್ಕಿಹೆಕ್ಕಿ
ಅತ್ತ, ಇತ್ತ, ಮೇಲೆ ಕೆಳಗೆ
ಆ ಗೂಡಲಿ, ಈ ಮರದಲಿ,
ಏನನ್ನು ನೋಡುತಿರುವೆ ಇಣುಕಿ ಇಣುಕಿ?

*****
ಮೋಡಗಳ್ಯಾಕೋ ಧರೆಗೆ ಬಂದಾವ ಇಂದು.. 
ಸೌಮ್ಯದಿ ಚಲಿಸುತ್ತ ..ಯಾರನ್ನೋ ಆರಿಸುತ್ತ ..
ತವಕದಿ ಮುನ್ನುಗ್ಗುತ್ತಾ ..ಸುಯ್ಯನೆ ಕೂಗಿ ಕರೆಯುವಂತೆ ..!

ಅತ್ತಾಗೆ ಕಪ್ಪಗು ಅಲ್ಲ ಇತ್ತಾಗ ಬೆಳ್ಳಗೂ ಅಲ್ಲ 
ತಿಳಿ ಕಪ್ಪು ಸವರಿದ ಹಾಗೆ ಮುಖದಾಗ 
ಬಿಡಿ ಬಿಡಿಯಾಗಿ ಹೊರಟಾಳ ...ಇವಳ ಚಲನವು ಯಾರ ಕಡೆಗೋ ? 
******
ಮತ್ತೆ ಸಿಗೋಣ

ಪ್ರೀತಿಯಿಂದ
ನಟರಾಜು :))


ಗುರುವಾರ, ಸೆಪ್ಟೆಂಬರ್ 20, 2012


ಎಲೆ ಮರೆ ಕಾಯಿ ೫೭
ನನಗಿಂತ ನಿನ್ನ 
ಹೊತ್ತ ಹೃದಯ 
ಭಾರವಾಯಿತೆನೆಗೆ,
ಎಷ್ಟು ತಡೆದರೂ 
ನಿನ್ನೆಡೆಗೆ ವಾಲುತಿಹುದು,
ನಿನ್ನಯ ಪ್ರೇಮದಿ
ಸಮತಟ್ಟಾಗಿದ್ದ
ಮನದ ನೆಲವೂ..
ಇಳಿಜಾರಾಯ್ತೆ!!

ಮಕ್ಕಳು ಜಾರು ಬಂಡೆ ಕಂಡರೆ ಸಾಕು ಅವರು ಬೇರೆಯದೇ ಪ್ರಪಂಚಕ್ಕೆ ಹೊಕ್ಕಿ ಬಿಡುತ್ತಾರೆ. ಅಲ್ಲಿ ತಮ್ಮ ಜೊತೆಗಿರುವ ಅಪ್ಪ ಅಮ್ಮ ಯಾರೂ ಸಹ ಕಣ್ಣಿಗೆ ಕಾಣುವುದಿಲ್ಲ. ಅವರ ಕಣ್ಣಿಗೆ ಜಾರುಬಂಡೆಯೊಂದು ಬೆಟ್ಟದ ಹಾಗೆ. ಅವರು ಎಷ್ಟೇ ಪುಟ್ಟ ಮಕ್ಕಳಾಗಿದ್ದರೂ ಯಾರ ಸಹಾಯವನ್ನು ತೆಗೆದುಕೊಳ್ಳದೆ ಜಾರು ಬಂಡೆಯನ್ನು ಹತ್ತುವ ಪ್ರಯತ್ನ ಮಾಡುತ್ತಾರೆ. ಹಾಗೆ ಹತ್ತಿ ಜಾರು ಬಂಡೆಯ ಶಿಖರವ ತಲುಪಿದ ಮೇಲೆ ಆ ಇಳಿಜಾರಿನಲ್ಲಿ ಜಾರುತ್ತಾ ಬರುವಾಗ ಖುಷಿಯಿಂದ ಹಿಗ್ಗಿ ಬಿಡುತ್ತಾರೆ. ಜಾರುತ್ತಾ ತಮ್ಮ ಪಾದ ನೆಲವನ್ನು ಮುಟ್ಟಿದ ಮರುಕ್ಷಣ ಮತ್ತೆ ಜಾರು ಬಂಡೆಯನ್ನು ಏರಲು ಓಡುತ್ತಾರೆ. ಜಾರು ಬಂಡೆಯನ್ನು ಹತ್ತುವ ಕೆಲಸ ಯಾಕೋ ಅವರಿಗೆ ಕಷ್ಟದ ಕೆಲಸವಾಗಿ ಕಾಣುವುದಿಲ್ಲ. ಯಾಕೆಂದರೆ ಅಲ್ಲಿ ಜಾರುವಾಗ ಇರುವ ಸುಖವೇನೆಂದು ಅವರಿಗೆ ಮಾತ್ರ ಗೊತ್ತಿರುತ್ತದೆ. ಹಾಗೆಯೇ ಪ್ರೇಮಿಯೂ ಸಹ ಪ್ರೇಮವೆಂಬ ಜಾರುಬಂಡೆಯಂತಹ ಬೆಟ್ಟವನ್ನು ಎಷ್ಟೇ ಕಷ್ಟಗಳೂ ಎದುರಾದರೂ ಹತ್ತಿ ಅಲ್ಲಿ ಜಾರುತ್ತಾ ಸುಖಿಸುತ್ತಾನೆ. ಮಕ್ಕಳು ಮತ್ತು ಪ್ರೇಮಿಗಳು ತಮ್ಮ ತಮ್ಮ ಜಾರುಬಂಡೆಗಳ ಆಟದಲ್ಲಿ ಜಾರಿ ಜಾರಿ ಬಟ್ಟೆಯನ್ನು ಹರಿದುಕೊಳ್ಳುವುದು, ಮೈ ಕೈ ತರಚಿಕೊಳ್ಳುವುದು ಸಾಮಾನ್ಯ.. :)) ಯಾಕೋ ಮೇಲಿನ ಕವನದ ಸಾಲುಗಳ ಓದಿ ಅಬ್ಬಬ್ಬಾ!! ಎನಿಸಿಬಿಟ್ಟಿತು. ಕವಿಗಳ ಹೋಲಿಕೆಗಳೇ ಹಾಗೆ ನಾವು ಕಲ್ಪಿಸಿಲಾರದನ್ನು ಅವರು ಕಲ್ಪಿಸಿ ನಮ್ಮನ್ನು ಬೆರಗುಗೊಳಿಸಿಬಿಡುತ್ತಾರೆ. ಮನದ ನೆಲವನ್ನು ಇಳಿಜಾರಿಗೆ ಹೋಲಿಸಿ ನನ್ನಲ್ಲಿ ಹೀಗೊಂದು ಭಾವನಾ ಲಹರಿಗಳ ಎಬ್ಬಿಸಿದ ಗೆಳೆಯನ ಬ್ಲಾಗಿನ ಹೆಸರು ಹಿಂದಿನ ಹೆಸರು ಸೌಂಡ್ ಆಫ್ ಹಾರ್ಟ್ ಈಗ ಅದರ ಹೆಸರು "ಹೃದಯವಾಣಿ".

"ಮುಂಜಾನೆ ಏಳುವುದೆಂದರೆ ಅದೇಕೋ ಗೊತ್ತಿಲ್ಲ, ಪುಟಾಣಿ ಮಗು ತನ್ನ ಬಳಿ ಇದ್ದ ಆಟಿಕೆಯನ್ನು ಕೇಳಿದಾಗ ಕೊಡದೇ ಇದು ನನ್ನದು -ಇದು ನನ್ನದು, ನಾ ಯಾರಿಗೂ ಕೊಡುವುದಿಲ್ಲವೆಂದು ಮಾಡುವ ಮೊಂಡಾಟದಂತೆ ಮನವು ಮುಂಜಾನೆಯ ಅರೆನಿದ್ರೆಯನ್ನು ಬಿಟ್ಟುಕೊಡಲು ಹಿಂಜರಿಯುತಿತ್ತು."

ಹಾಗೆ ಮೊಂಡಾಟ ಮಾಡುವ ಮನಸ್ಸನ್ನು ಪುಸಲಾಯಿಸಿ ಜಾಗಿಂಗ್ ಗೆ ಹೊರಡುವ ಹುಡುಗ ದಾರಿ ಮಧ್ಯದಲ್ಲಿ ಕೋಗಿಲೆಯ ದನಿ ಕೇಳಿ ಅದನು ಅನುಕರಿಸಿ ಅದು ಮತ್ತೆ ಮತ್ತೆ ಕೂಗುವಂತೆ ಮಾಡುವುದ ಕುರಿತು ಓದುವಾಗ ಯಾಕೋ ಖುಷಿಯಾಗುತ್ತದೆ. ಈ ಗೆಳೆಯನ ಲೇಖನ ಓದುತ್ತಿದ್ದಂತೆ ಕಾಲೇಜಿನ ದಿನಗಳಲ್ಲಿ ಕೋಳಿಗಳ ರೇಗಿಸಿ ಕೂಗಿಸುತ್ತಿದ್ದ ದಿನಗಳು ಯಾಕೋ ನೆನಪಿಗೆ ಬರುತ್ತವೆ. ನಮ್ಮ ಈ ಕವಿ ಗೆಳೆಯ ಬೆಳೆದು ದೊಡ್ಡವನಾಗಿದ್ದರೂ ಇನ್ನೂ ತನ್ನ ಮುಗ್ದತೆಯನ್ನು ಕಾಯ್ದಿಟ್ಟುಕೊಂಡಿರುವುದು ಖುಷಿಯ ವಿಚಾರ.

ಮಚ್ಚಿನಂತೆ ಹರಿತವಾದ ನಿನ್ನ ಸೌಂದರ್ಯದಿ 
ತೆಂಗಿನಕಾಯಿಯಂತಹ ಎನ್ನಯ ಮನದ ಸಿಪ್ಪೆಯನ್ನು ಸುಲಿದು 
ಅಂತರಂಗವೆಂಬ ಕಳಶವ ಬೇಧಿಸಿ 
ಹೃದಯವೆಂಬ ತಿಳಿಯಾದ ಬಿಳಿ ಕವಚದೊಳಗೆ
ಎಳನೀರಿನಂತೆ ಸವಿಯಾಗಿದ್ದ ನನ್ನನ್ನೇ ಹೀರಿಬಿಟ್ಟೆಯಲ್ಲೇ !!

ನೋಡಿ ಮುಗ್ದರಿಗೆ ಎಂತಹ ಸ್ಥಿತಿ ಬರುತ್ತೆ ಅಂತ :)). ಸುಮ್ಮನೆ ತಮಾಷೆಗೆ ಹಾಗಂದೆ. ಶಿವ ಶಂಭುಲಿಂಗನನ್ನು ಸದಾ ನೆನೆಯುತ್ತಾ ಬಹುಶಃ ತನ್ನ ಮನದಲ್ಲಿ ಮೂರ್ನಾಲ್ಕು ಕೋಣೆಗಳ ಮಾಡಿ ಒಮ್ಮೆ ಪ್ರೇಮದಲ್ಲಿ, ಒಮ್ಮೆ ಆಧ್ಯಾತ್ಮದಲ್ಲಿ, ಒಮ್ಮೆ ಹಾಸ್ಯದಲ್ಲಿ, ಹೆಚ್ಚಾಗಿ ಫೇಸ್ ಬುಕ್ ನಲ್ಲಿ ಕಳೆದು ಬಿಡುವ ನಮ್ಮ ನಡುವಿನ ಪುಟ್ಟ ಗಣಿ ಅಂದರೆ ಗಣೇಶ್ ಜಿ ಪಿ ಇಂದಿನ ಎಲೆ ಮರೆ ಕಾಯಿಗಳ ಜೊತೆ ಮಾತುಕತೆಯ ವಿಶೇಷ ಅತಿಥಿ. ಗಣಿ ಜೊತೆ ನಡೆಸಿದ ಮಾತುಕತೆಯ ತುಣುಕುಗಳು ಸಹೃದಯಿಗಳೇ ಇಗೋ ನಿಮಗಾಗಿ..

ಗಣೇಶ .ಜಿ.ಪಿ

"ಅಲ್ಲಿ ಇಲ್ಲಿ ಗೀಚೋ ಮಗುನ ನಿಮಗೆಲ್ಲ ಪರಿಚಯ ಮಾಡುಸ್ತಿನಿ ಅಂತ ನಮ್ಮ ನಟಣ್ಣ ಸ್ಯಾನೆ ತಲೆ ತಿಂದುಬಿಟ್ರು, ಅವರ ಆತ್ಮೀಯತೆಗೆ ಮಣಿದು ನಿಮ್ಮೆಲ್ಲರ ಮುಂದೆ ತಲೆಭಾಗಿಸಿ ನಮಸ್ಕರಿಸುತ್ತ ಅಪ್ಪ -ಅಮ್ಮರ ನೆನೆಯುತ್ತ :)) ಆ ನನ್ನ ಶಂಭುಲಿಂಗನ ಪಾದಕಮಲಗಳನ್ನು ಸ್ಮರಿಸುತ್ತ, ನನ್ನ ಪರಿಚಯ ಮಾಡಿಕೊಳ್ಳುತ್ತಿದ್ದೇನೆ, ಅಪ್ಪ -ಅಮ್ಮಂದಿರೆ, ಅಕ್ಕ -ಅಣ್ಣಂದಿರೆ, ಮತ್ತು ನೆಚ್ಚಿನ ಗೆಳೆಯ- ಗೆಳತಿಯರೆ,, ಇದೇನಪ್ಪ ಇದು ರಾಜಕಾರಣಿ ತರ ಶುರು ಹಚ್ಹ್ಕೊಬಿಟ್ಟ ಅನ್ಕೋಬೇಡಿ ನಿಮಗೆ ಮರ್ಯಾದೆ ಕೊಡಬೇಕಾದ್ದು ನನ್ನ ಧರ್ಮ ಅದಕ್ಕಷ್ಟೇ :))) ನಾನು ಸ್ವಲ್ಪ ಕುಯ್ಯೋದು ಜಾಸ್ತಿ ಒಂತರ ಲೆಕ್ಚರ್ ಅಂತಾರಲ್ಲ ಹಂಗೆ ಸ್ವಲ್ಪ ಸಹಿಸ್ಕೊಬೇಕು ದಯವಿಟ್ಟು. :))).

ನಾವು ಗಣೇಶ .ಜಿ.ಪಿ ಅಂತ ಹೇಳ್ಬಿಟ್ಟು ಎಲ್ಲ ಪ್ರೀತಿಯಿಂದ ಗಣಿ ಅಂತಾರೆ ,ನನ್ನ ಅಪ್ಪ ಹವಾಲ್ದಾರ್ , ಅಮ್ಮ ಗೃಹಿಣಿ ,ಇನ್ನು ಒಬ್ಬ ಪ್ರೀತಿಯ ಪುಟ್ಟ ತಮ್ಮ ನಾಲ್ವರ ಒಂದು ಪುಟ್ಟ ಸಂಸಾರ  ನಮ್ಮ ತಂದೆಯ ಊರು ಅರಸೀಕೆರೆ , ರೈತರಾಗಿದ್ದ ತಂದೆಗೆ ಪೋಲಿಸ್ ಪೇದೆ ಹುದ್ದೆ ಸಿಕ್ಕಿದ್ದರಿಂದ ಮೈಸೂರಿಗೆ ನಮ್ಮ ಪಯಣ ಬೆಳೆಯಿತು. ಅಪ್ಪನ ಪರಿಶ್ರಮ ಶಿಸ್ತಿನ ಹಾರೈಕೆ ನಮ್ಮಲ್ಲಿ ಸದ್ಗುಣಗಳ ಆಗರ (ಸ್ವಲ್ಪ ಬಿಲ್ಡ್ ಅಪ್ಗೆ ) ತುಂಬಿತು.  ನಮ್ಮದು ಮಧ್ಯಮ ವರ್ಗದ ಕುಟುಂಬ, ಜೀವನದಲ್ಲಿ ಹಾಸಿಗೆ ಇದ್ದಷ್ಟು ಕಾಲು ಚಾಚು ಎಂಬಂತೆ ನಡೆಯುತ್ತಿತ್ತು. ಪ್ರಾಥಮಿಕ ಹಂತದಿಂದಲೂ ನನಗೆ ಚಿತ್ರ ಬರೆಯುವುದು, ಮತ್ತಿತರ ಕ್ರಿಯಾಶೀಲತೆಯಲ್ಲಿ ತುಂಬಾ ಆಸಕ್ತಿ ಹಾಗಾಗಿ ನಿರಂತರ ಚಟುವಟಿಕೆಗಳಲ್ಲಿ ಮುಳುಗಿರುತ್ತಿದ್ದೆ  ಎಲ್ಲ ವಿಭಾಗದಲ್ಲೂ ಭಾಗಿಯಾಗಬೇಕೆಂಬ ಹುಚ್ಚು ಬಯಕೆ ಆದದ್ದರಿಂದ ಸದಾ ಕಾಲ ಪ್ರಯತ್ನದಲ್ಲೇ ಇರುತ್ತಿದ್ದೆ. ಓದಿನಲ್ಲಿ ಏನು ಕಡಿಮೆ ಇರಲಿಲ್ಲ. ಪ್ರೋತ್ಸಾಹ ಸಿಗದೇ ಇದ್ದರು ಎಲ್ಲ ಸ್ಪರ್ಧೆಗಳಲ್ಲಿ ಸತತವಾಗಿ ಭಾಗವಹಿಸುತ್ತಿದ್ದೆ. ಮತ್ತೆ ಹೈಸ್ಕೂಲಿನಲ್ಲಿದ್ದಾಗ ನಮಗೆ ವಿ.ರಾಜಪ್ಪ ಎಂಬ ಕನ್ನಡ ಶಿಕ್ಷಕರಿದ್ದರು ಅವರ ಭೋದನಾ ಶೈಲಿ ನನ್ನ ಮನ ಹೊಕ್ಕಿತ್ತು ಆ ಸಮಯದಲ್ಲೇ ದ. ರಾ .ಬೇಂದ್ರೆಯವರ, ಕುವೆಂಪುರವರ ಕವಿ-ಕಾವ್ಯ ಪರಿಚಯ ಮತ್ತೆ ಅವರ ಕಾವ್ಯ ಶೈಲಿಯನ್ನು ಪಟ್ಯದಲ್ಲಿ ನೋಡಿ, ಅದರಲ್ಲೂ ನಮ್ಮ ರಾಜಪ್ಪ ಗುರುಗಳಿಂದ ಅದನ್ನು ಕೇಳುತಿದ್ದರೆ ಮನಕ್ಕೆ ಹಬ್ಬವೋ ಹಬ್ಬ. ಹೀಗೆ ನಾನು ಶ್ರೇಷ್ಠ ಕವಿಗಳ ಭಾವಚಿತ್ರ ಬರೆದು ಏನು ಗೀಚೋದು ಎಂದು ಭಾವಕ್ಕೆ ಒಳಗಾಗಿದ್ದೆ ಆಗ ಬರೆದ ಬದುಕಿನ ಮೊತ್ತ ಮೊದಲ ಕವನ ಇದು (೮ನೆ ತರಗತಿಯಲ್ಲಿದ್ದಾಗ )

ಕಂದ
ಅಲ್ಲಿ ನೋಡು ಆಡುವ ಕಂದ
ಅದು ಆಡುವ ನೋಟವೇ ಚಂದ !!
ಆ ಕಂದ ಮುತ್ತಿತ್ತರೆ ಮಕರಂದ
ಅದನ್ನು ಸವಿದರೆ ಜೇಂಕಾರದ ಆನಂದ !!

ನಂತರ ಕವನ ಇರಲಿ ಅದರ ಜೊತೆಗೆ ಚಿತ್ರ ಬರೆಯುವುದು ಕೂಡ ಕ್ಷೀಣಿಸುತ್ತಾ ಹೋಯ್ತು ಹೈಸ್ಕೂಲಿನಲ್ಲಿ ವಚನಕಮ್ಮಟ ಎಂಬ ಸ್ಪರ್ಧೆ ಆಯೋಜಿಸಿದ್ದರು ಅದರಲ್ಲಿ ಭಾಗವಹಿಸಿದ ನಾನು ವಚನಗಳನ್ನು ಪಟಪಟನೆ ನುಡಿಯುತ್ತಿದೆ, ಎಲ್ಲರು ಕಂಡು ಬೆರಗಾಗುತಿದ್ದರು, ದುರಾದೃಷ್ಟವಶ ಅಂತರ ಸ್ಕೂಲಿನ ವಿಭಾಗದಲ್ಲಿ ಸಮಾದಾನಕರ ಬಹುಮಾನಕ್ಕೆ ತೃಪ್ತಿ ಪಡಬೇಕಾಯ್ತು. ಆಗಲೇ ಸಣ್ಣ ಪುಟ್ಟ ಉತ್ತೇಜಿಸುವ ಪುಸ್ತಕಗಳನು ಕೊಂಡುಕೊಳ್ಳುತ್ತಿದ್ದೆ. ಬಿಡುವಾದಾಗ ಓದುತಿದ್ದೆ. ಕಾಲೇಜಿನಲ್ಲಿ ಒಂದೆರಡು ಪ್ರಬಂಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದೆ, ಮತ್ತೆ ಅಂತರಕಾಲೇಜು ವಿಭಾಗದಲ್ಲಿ ಭಾಗವಹಿಸಿದಾಗ ಪ್ರೋತ್ಸಾಹವಿಲ್ಲದೆ ಮತ್ತೆ ಮರುಕ ಪಟ್ಟೆ.  ಹೀಗೆ ಇದ್ದ ಕ್ರಿಯಾಶೀಲತೆಗಳಿಗೆ ಪ್ರೋತ್ಸಾಹ ಸಿಗದೇ ಎಲ್ಲ ನೀರಿಲ್ಲದೆ ಬಾಡುವ ಹೂಗಳಾದವು. ಓದಿ ವೈದ್ಯನಾಗಬೇಕೆಂದಿದ್ದೆ ದುಡ್ಡಿನ ಮೂಟೆ ಬೇಕೆಂದು ತಿಳಿದು ಮತ್ತು ಸರಿಯಾದ ಮಾರ್ಗದರ್ಶನವಿಲ್ಲದೆ ಏಕೋ ಮನಸ್ಸು ಆಸೆ ಕೈ ಬಿಟ್ಟಿತ್ತು. ನಂತರ ಇಂಜಿನಿಯರಿಂಗ್ ಸೇರಿದೆ. ಆಗಾಗ ಡೈರಿ ಗೀಚುವ ಹವ್ಯಾಸ ಇತ್ತು ಅದು ಆಗಾಗ ಸೋಮಾರಿತನಕ್ಕೆ ಸಿಕ್ಕಿ ಬಳಲುತಿತ್ತು, ಹಾಗೆ ಕಾಲೇಜಿನ ಹುಡುಕುತನ ಹುಡುಗಾಟದ ಬದುಕು ಒಳ್ಳೆಯ ನೀತಿ ಪಾಟವನ್ನೇ ಕಲಿಸಿತು ಎನ್ನಬಹುದು. ನಂತರ ಇಂಜಿನಿಯರಿಂಗ್ ಪದವಿ ಮುಗಿಸಿ, ಹೈದರಾಬಾದಿನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಡಿಸೈನ್ ಇಂಜಿನಿಯರ್ ಆಗಿ ಒಂದು ವರ್ಷ ಕಾರ್ಯ ನಿರ್ವಹಿಸಿದೆ. ಅಪ್ಪ - ಅಮ್ಮರ ಅನಾರೋಗ್ಯ ಜೊತೆಗೆ ಸ್ನಾತಕೋತ್ತರ ಪದವಿ ಮುಗಿಸುವ ಹಂಬಲ ಶಂಭುಲಿಂಗನ ದಯೆ ಎನ್ನಬಹುದು ನನಗೂ ಅನಾರೋಗ್ಯ ಕಾಡಿತ್ತು ಜೊತೆಗೆ ನನ್ನಲ್ಲಿದ್ದ ನನ್ನತನ ಸ್ವಂತ ಆಲೋಚನೆಗಳಿಗೆ ಮರುಜೀವ ಕೊಡುವ ಹಂಬಲವು ಜೊತೆಗೆ ಹಿರಿ ಮಗನೆಂಬ ಜವಾಬ್ದಾರಿ ಹೆಚ್ಚಾಗಿತ್ತು ಅದಕ್ಕೆ ಆಗೋದೆಲ್ಲ ಒಳ್ಳೇದಕ್ಕೆ ಅಲ್ಲವೇ ಅಂತ ತಲೆ ಕೆಡಿಸ್ಕೊಳ್ಳದೆ ರಾಜಿನಾಮೆ ಇತ್ತು ಬಂದೆ.

ಕಾಲೇಜು ಶುರುವಾಗಲು ತುಂಬಾ ದಿನವಿರುವುದರಿಂದ ಕಾಲಹರಣಕೆಂದು ಈ ಅಂತರ್ಜಾಲದ ಫೆಸುಬುಕ್ಕಿಗೆ ಬರುತ್ತಿದ್ದೆ, ಆಗಲೇ ಕಂಡದ್ದು ಕನ್ನಡ ಬ್ಲಾಗ್, ಡೈರಿಯಲ್ಲಿ ವಿಮರ್ಶಿಸುತ್ತಿದ್ದ ಅಕ್ಷರಗಳು ಜೀವ ಪಡೆದು  ಬ್ಲಾಗಿನ, ಕವಿತೆಗಳ, ಕಥೆಗಳ ಓದತೊಡಗಿದವು, ಆಗಿನ ವಚನಾಮೃತದ ಸವಿಯೂ ಇನ್ನು ಮಾಸಿರಲಿಲ್ಲ ಅನ್ಸುತ್ತೆ ಅದರ ಜೊತೆಗೆ, ಅನುಭವ ಸಾತ್ ನೀಡ್ತು, ಕಾಣದ ಹಾಗೆ ನನ್ನ ಹೃದಯದ ದನಿ ಕೇಳತೊಡಗಿತ್ತು, ಕೈಬೆರಳುಗಳು ಕುಣಿಯತೊಡಗಿದ್ದವು. ಪ್ರಸಾದ್ ಮತ್ತು ಪಮ್ಮಿ ಗೊತ್ತೇ ಇರಬೇಕು ನಿಮಗೆ ಅವರ ಅಣ್ಣನಾಗಿರುವುದರಿಂದ ಅವರು ಈ ಅಣ್ಣನ ಹೃದಯದ ಮಾತುಗಳ ಅರಿತವರು ಅದನ್ನು ಬೇರೆಯವರು ಕೇಳಲಿ ಎಂದು ಹೊರ ತರುವಂತೆ ಹೇಳಿದರು, ಬ್ಲಾಗ್ ಮೊದಲಿಂದಲೂ ಬರೆಯಬೇಕು ಅಂದ್ಕೊಂಡು ಒಂದು ಬ್ಲಾಗ್ ಓಪನ್ ಮಾಡಿ ಆಂಗ್ಲದಲ್ಲಿ ಏನೇನೋ ಗೀಚಿದ್ದೆ. ನಿಮ್ಮನ್ನೆಲ್ಲ ನೋಡಿದ ಮೇಲೆ ಮಾತೃ ಭಾಷೆಯ ಹಿಡಿತವಿರುವಾಗ ಬೇರೆ ಭಾಷೆ ಏಕೆ ಎಂದು ಕನ್ನಡ ಬ್ಲಾಗನ್ನು ತಟ್ಟಿದೆ ಅದು ಹಾಗೆ ಬಾಗಿಲು ತಗಿದು ಮಿಡಿಯತೊಡಗಿತು :)

ಈ ಕನ್ನಡ ಬ್ಲಾಗನ್ನು ಪರಿಚಯಿಸಿದ ಆ ನನ್ನ ಇಬ್ಬರು ಪುಟ್ಟ ಕೂಸುಗಳಿಗೆ ಎಷ್ಟು ಧನ್ಯವಾದಗಳು ತಿಳಿಸಿದರೂ ಸಾಲದು ಮತ್ತೆ ಕನ್ನಡ ಬ್ಲಾಗ್ ಎಂಬ ವೇದಿಕೆ ಕೇವಲ ಒಂದು ಸಾಮಾನ್ಯ ವೇದಿಕೆಯಲ್ಲ ಇದು ಮನಸ್ಸಿನ ಆಳದಲ್ಲಿ ಅಡಗಿರುವ ನೆನಪಿನ ಮತ್ತು ಅನುಭವಗಳ ಗಣಿ ಇದ್ದ ಹಾಗೆ ಇಲ್ಲಿನ ಎಲ್ಲ ಸದಸ್ಯರ ಹಾರೈಕೆಯಲ್ಲಿ ದೂಳು ಕುಳಿತಿದ್ದ ನನ್ನ ಕನ್ನಡ ಸಾಹಿತ್ಯದ ಕೃಷಿಗೆ ಒಂದು ಆಯಾಮ ಸಿಕ್ಕಿದಂತಾಯ್ತು :))) ನಿಜವಾಗಲು ಫೆಸ್ಬುಕ್ಕು ಎಂಬ ಅಡ್ಡಾದಲ್ಲಿ ಕನ್ನಡ ಬ್ಲಾಗಿನ ಕನ್ನಡ ಸಾಹಿತ್ಯ ಕೃಷಿ ಅಮೋಘ ಎಲ್ಲ ನಿರ್ವಾಹಕ ಬಳಗಕ್ಕೂ ನನ್ನ ಅಭಿನಂದನೆಗಳು:))) ಕನ್ನಡ ಬ್ಲಾಗಿನ ಸದಸ್ಯ ಎಂಬ ಹೆಮ್ಮೆಯ ಗರ್ವ ಇದೆ :))) ಎಲ್ಲರ್ಗೂ ಒಬ್ಬ ಕಿರಿಯನಾಗಿ ಒಂದು ಸಣ್ಣ ಕಿವಿಮಾತು ಈ ಜೀವನ ಕ್ಷಣಿಕ ಇರುವಷ್ಟು ದಿನ ನಿಸ್ವಾರ್ಥ ಮನೋಭಾವದಿಂದ ವಸುದೈವ ಕುಟುಂಬ ಎಂಬಂತೆ ಎಲ್ಲರೂ ಒಂದೇ ತಾಯಿಯ ಮಕ್ಕಳಂತೆ ಬಾಳೋಣ ಕಲಹಕ್ಕೆ ಎಡೆ ಮಾಡಿಕೊಡದೆ ತಗ್ಗಿ ನಡೆದರೆ ಮೆಚ್ಚುವನು ನಮ್ಮ ಶಂಭುಲಿಂಗ ನಾನು ಎಂಬ ಭಾವ ಇರದೇ ನಮಗಿಂತ ಮೇಲೊಬ್ಬ ಇದ್ದಾನೆ ಎಂಬ ಭಾವ ಇಟ್ಟುಕೊಳ್ಳಿ ಅದು ನಿಮ್ಮ ಇಷ್ಟ ದೈವ ಇರಬಹುದು( ಆಸ್ತಿಕರಿಗೆ ) ,,, ನಾಸ್ತಿಕರಿಗೆ (ನಿಮ್ಮ ಆತ್ಮವೇ ಪರಮಾತ್ಮ ನೀವು ಅವನ ಪಾಲಕರು ಅಷ್ಟೇ ) ಎಂದು ಈ ಅಲ್ಪನ ಪರಿಚಯ ಮುಗಿಸಿದ್ದೇನೆ. ದಯವಿಟ್ಟು ಇಷ್ಟವಾದಲ್ಲಿ ತಲೆಗೆ ಹಚ್ಚಿ ಕೊಳ್ಳದೆ ಹೃದಯಕ್ಕೆ ಹಾಕಿಕೊಳ್ಳಿ ಇಷ್ಟವಾಗದಿದ್ದರೆ ತಲೆಗೆ ಬಿಟ್ಟುಬಿಡಿ ಅದು ಮರೆಸಿಬಿಡುತ್ತೆ :))) ಶಂಭುಲಿಂಗ ಎಲ್ಲರ್ಗೂ ಒಳ್ಳೆಯದನ್ನೇ ಮಾಡ್ಲಿ :))))"

ಎಂದು ಮಾತು ಮುಗಿಸಿದ ಗಣಿ ಜಾಸ್ತಿ ಕೊರೆದಿದ್ದರೆ ಗಣಿ ಬ್ಲಾಗಿನ ಲಿಂಕ್ ಕೆಳಗೆ ನೀಡಿರುವೆ. ಅಲ್ಲಿ ಹೋಗಿ ನಿಮ್ಮ ಕೋಪ ತೀರಿಸಿಕೊಳ್ಳಿ.. :)))

http://ganeshagp.blogspot.in/

ಗಣಿಯ ಒಂದು ಕವನ ನಿಮಗಾಗಿ ನೀಡಿರುವೆ ಖುಷಿಯಿಂದ ಓದಿಕೊಳ್ಳಿ..

ನಿನ್ನಯ ಕದನವೆಂಬ ಆಟಕೆ
ಈ ಜಡ -ಜಟಿಲವೆಂಬ
ಶಾರೀರವ ಮಾಡಿ ,
ಸಕಲ ಇಂದ್ರಿಯಗಳನಿತ್ತು
ಅವ ಮೂದಲಿಸಿ ,
ಲಾಲಿಸಿ -ಪಾಲಿಸಿ ,
ಕುಣಿಸಿ -ದಣಿಸಿ ,
ನೋವು-ನಲಿವೆಂಬ
ಕಷ್ಟ - ಕಾರ್ಪಣ್ಯಗಳನಿತ್ತು ,
ಕೊನೆಗೆ ಸಾಯಿಸಿ ಪರಾರಿಯಾಗುವ
ದುರಾತ್ಮವೆ, ಈ ಕದನಕೆ
ನೀನಿತ್ತಿದ್ದು ,ಏಕಾತ್ಮವಲ್ಲ !
ದ್ವಂದಾತ್ಮ !!
ಆಟದಿ ಸೋಲುಣಿಸಲಿತ್ತ
ಪ್ರೇತಾತ್ಮ ಒಂದಾದರೆ,
ಅದರೆದುರು ನೀ ಗೆಲ್ಲಲಿತ್ತ
ಆತ್ಮವೇ ಪರಮಾತ್ಮ !!!
ನಡುವೆ ನರಳುತಿಹುದು
ಎನ್ನಯ ಜೀವಾತ್ಮ ! :(:(


ಮತ್ತೆ ಸಿಗೋಣ

ನಿಮ್ಮ ಪ್ರೀತಿಯ
ನಟರಾಜು :))

ಶುಕ್ರವಾರ, ಸೆಪ್ಟೆಂಬರ್ 14, 2012


ಎಲೆ ಮರೆ ಕಾಯಿ ೫೬ 
ಆಕೆ ಮುನಿಸಿಕೊಂಡಾಗ 
ಪಾತ್ರೆಗಳೂ ಮಾತನಾಡುತ್ತವೆ.

ಅಕ್ಕಿ ಮುಗಿದಾಗಲೇ ಯಾಕೋ 
ಹಸಿವು ಹೆಚ್ಚಾಗುತ್ತದೆ.

ಕುಡಿದು ಓಡಿಸುವವನ ಗಾಡಿಯೂ
ತೂರಾಡುತ್ತಲೇ ಬರುತ್ತದೆ!!

ಕೆಲವು ಭಾವಗಳೇ ಹಾಗೆ ತಮ್ಮೊಳಗೆ ಮತ್ತೊಂದು ಭಾವವನ್ನು ನಮಗೆ ಕಂಡೂ ಕಾಣದಂತೆ ಅಡಗಿಸಿಕೊಂಡಿರುತ್ತವೆ. ಉದಾಹರಣೆಗೆ ಹುಸಿ ಕೋಪದೊಳಗಿನ ಪ್ರೀತಿ, ಹಸಿದವನ ಒಳಗಿರುವ ಜೀವನ ಮುಖಿ, ಮುಗುಳ್ನಗುವಿನ ಹಿಂದಿರುವ ಕುಹಕ, ಹೀಗೆ ಹುಡುಕುತ್ತಾ ಹೋದರೆ ಒಂದು ಭಾವದೊಳಗಿನ ಮತ್ತೊಂದು ಒಳ ಭಾವ ಅಥವಾ ಒಳಾರ್ಥ ನಮಗೆ ಗೋಚರಿಸುತ್ತಾ ಹೋಗುತ್ತದೆ. ಹೆಚ್ಚು ಸಲ ಹೊರ ಭಾವವನ್ನು ಮಾತ್ರ ಅರ್ಥೈಸಿಕೊಂಡು ಆ ಭಾವದ ಒಳಾರ್ಥವನ್ನು ಅರ್ಥ ಮಾಡಿಕೊಳ್ಳುವಲ್ಲಿ ನಾವು ವಿಫಲರಾಗುತ್ತೇವೆ. ಆ ವಿಫಲತೆಯನ್ನು ಜನ ಮೂರ್ಖತನ ಎಂದು ಕರೆದುಬಿಡುತ್ತಾರೆ. ಗೆಳೆಯನೊಬ್ಬನ ಬ್ಲಾಗಿನಲ್ಲಿ ಮೇಲಿನ ಚಂದದ ಎರಡು ಸಾಲುಗಳ ಚುಟುಕಗಳ ಓದುತ್ತಲೇ ಯಾಕೋ ಹೀಗೊಂದು ಭಾವಗಳ ಕುರಿತ ಭಾವನಾ ಲಹರಿ ನನ್ನಲ್ಲಿ ಮೂಡುತ್ತಾ ಹೋಯಿತು. ಅಂದ ಹಾಗೆ ಈ ಗೆಳೆಯನ ಬ್ಲಾಗಿನ ಹೆಸರು "ಫ್ರೊಮ್ ಮೈ ಹಾರ್ಟ್"

"ಮದುವೆಗೆ ಮುಂಚೆ ಅಷ್ಟೇ ಇದೆಲ್ಲ, ಆಮೇಲೆ ..... ಏನಿಲ್ಲ. ಬರೀ ಬೊಗಳೆ ಪ್ರಪಂಚ. ಈ ಕರ್ಮಕ್ಕೆ ಲವ್ ಮ್ಯಾರೇಜ್ ಬೇರೆ ಯಾಕೆ ಬೇಕಿತ್ತೋ? ಪರಿಚಯವಾದ ದಿನಗಳಲ್ಲಿ ಅಟ್ ಲೀಸ್ಟ್ 10 ಗಂಟೆ ಫೋನಿನಲ್ಲೇ ಪ್ರಪಂಚ. ಕೂತಿದ್ದರೂ ನಿಂತಿದ್ದರೂ smsಗಳ ಮೇಲೆ sms. ಆ ಪ್ರೀತಿ ಮಾತು, ಆಗ ನೋಡುತ್ತಾ ಇದ್ದ ಮೂವೀಸ್, ಆಡ್ತಾ ಇದ್ದ ಹರಟೆ, ಭೇಟಿ ಆಗ್ತಾ ಇದ್ದ ದೇವಸ್ಥಾನ, ಬರೀತಾ ಇದ್ದ ಲೆಟರ್, ಕಳಿಸ್ತಾ ಇದ್ದ ಇ ಮೇಲ್, ಗ್ರೀಟಿಂಗ್ಸ್, ಆಗಾಗ ಕೊಡ್ತಾ ಇದ್ದ ಗಿಫ್ಟ್ಸ್.... ಪ್ರತಿಯೊಂದು ಹೇಗೆ ಮದುವೆ ಆದ ತಕ್ಷಣ ಮಾಯ ಆಗೋಯ್ತು ನೋಡು. ಎಲ್ಲಾ ಗಂಡಸರದ್ದು ಇದೇ ರಾಮಾಯಣ ಅಂತ ಕಾಣ್ಸುತ್ತೆ , ಬರೀ ಹುಡುಗಿರನ್ನ ಪಟಾಯಿಸೋಕೆ ಅಷ್ಟೆಲ್ಲಾ ಮಾಡ್ತಾರೆ ಅಂತ ಅನ್ಸುತ್ತೆ . ಹಿಂಗೆ ಇದ್ದಿದ್ರೆ ಮದುವೆ ಆಗದೇನೆ ಇರ್ಬೋದಿತ್ತು. ಈಗ ಸಾಲದ್ದಕ್ಕೆ ಮಗು ಬೇರೆ ಕೇಡು."

ಹೀಗೆ ತನ್ನ ನಲ್ಮೆಯ ಸಂಗಾತಿಯ ಕೋಪವನ್ನು ಕುರಿತು ಬರೆಯುತ್ತಾ ಹೋಗುವ ಬರಹಗಾರ ಯಾಕೋ ಗೊತ್ತಿಲ್ಲ ಅವನ ಸರಳ ಬರಹದ ಶೈಲಿಯಿಂದ ನಮಗೆ ಹೆಚ್ಚು ಹೆಚ್ಚು ಹತ್ತಿರವಾಗಿಬಿಡುತ್ತಾನೆ. ಈ ಗೆಳೆಯನ ಬರಹಗಳನ್ನು ಓದಿದಾಗ ಹಸಿದು ಬೆಳೆದವನಿಗಷ್ಟೇ ಅನ್ನದ ಮತ್ತು ಪ್ರೀತಿಯ ಮಹತ್ವ ತಿಳಿದಿರುತ್ತದೆ ಎಂದೆನಿಸಿತ್ತದೆ.

ಕುಡಿಯಲೋದ ಕರುವನೆಳೆದು,
ಕಂಬದಲ್ಲಿ ಕಟ್ಟಿಹಾಕಿ,
ತಾಯಮೊಲೆಯ ಹಿಂಡಿ ಕರೆದು,
ಹಾಲು ತಂದು ಮೊಸರ ಮಾಡಿ,
ಮೊಸರ ಗಡಿಗೆ ಕೆಳಗೆ ಬೀಳೆ,
ವ್ಯರ್ಥವಾಯಿತೇ, ಇಲ್ಲ ಅರ್ಥವಾಯಿತೇ?

ಈ ಗೆಳೆಯನ ಮೇಲಿನ ಕವಿತೆಯ ಸಾಲುಗಳ ಓದಿದಾಗ ಆ ಸಾಲುಗಳಲ್ಲಿ ಒಂದು ಚಂದದ ಲಯ ತುಂಬಿದೆ ಎಂದೆನಿಸುತ್ತೆ ಅಲ್ಲವೇ ಗೆಳೆಯರೇ? ಬರೀ ಕವಿತೆಗಳಲ್ಲಿ ಅಷ್ಟೇ ಅಲ್ಲ ಬದುಕಿನಲ್ಲೂ ಸಹ ಲಯ ತಂದುಕೊಂಡು ಕೊಳ್ಳೇಗಾಲ ತಾಲ್ಲೂಕಿನ ಲೊಕ್ಕನಹಳ್ಳಿ ಎಂಬ ಪುಟ್ಟ ಹಳ್ಳಿಯಿಂದ ಝೆಕ್ ರಿಪಬ್ಲಿಕ್ ನ ಪ್ರಾಗ್ ಎಂಬ ಸುಂದರ ನಗರ ತಲುಪಿ ಅಲ್ಲಿಂದಲೇ ಕನ್ನಡ ಸಾಹಿತ್ಯ ಕೃಷಿಯಲ್ಲಿ ತೊಡಗಿರುವ ಈ ಗೆಳೆಯನ ಬದುಕು ನಿಜಕ್ಕೂ ನಮ್ಮೆಲ್ಲರಿಗೂ ಸ್ಪೂರ್ತಿದಾಯಕ. "ಹಾಯ್ ನಟ್ಟು, ನಮಸ್ಕಾರ, ಎಲೆಮರೆ ಕಾಯಿಗಾ!! ಮೈ ಗಾಡ್, ನಂಗೆ ಬಹಳ ಮುಜುಗರವಾಗ್ತಾ ಇದೆ. ನಾನು ಅಂತ ದೊಡ್ಡ ಬರಹಗಾರ ಏನಲ್ಲ, ನೀವು ಪರಿಚಯ ಮಾಡ್ತಾ ಇರೋ ವ್ಯಕ್ತಿಗಳಿಗೆ ಹೋಲಿಸಿದರೆ ನಂದೇನೂ ಇಲ್ಲ." ಎಂದು ಮುಜುಗರಪಡುತ್ತಲೇ ಇಂತಹುದೊಂದು ಚಂದದ ಪರಿಚಯವನ್ನು ಗೆಳೆಯ ಸಂತೋಷ್ ಕುಮಾರ್ ಎಲ್ ಎಮ್ ಅವರು ನಮ್ಮೊಡನೆ ಹಂಚಿಕೊಂಡಿದ್ದಾರೆ. ಸಹೃದಯಿಗಳೇ, ಇಂದಿನ ಎಲೆ ಮರೆ ಕಾಯಿಗಳ ಜೊತೆ ಮಾತುಕತೆಯಲ್ಲಿ ಗೆಳೆಯ ಸಂತೋಷನ ಪರಿಚಯ ಇಗೋ ನಿಮಗಾಗಿ....

ಸಂತೋಷ್ ಕುಮಾರ್ ಎಲ್ ಎಮ್

"ನಮಸ್ಕಾರ ಗೆಳೆಯರೇ, ಹೇಳೋಕೆ ಹೇಳಿಕೊಳ್ಳುವಂಥ ಸಾಧನೆಯೇನೂ ಮಾಡಿಲ್ಲ. ಗೆಳೆಯ ನಟ್ಟುವಿನ ಒತ್ತಾಯದ ಮೇರೆಗೆ ಇದನ್ನು ಬರೆಯುತ್ತಿದ್ದೇನೆ ಅತೀ ಸಾಮಾನ್ಯ ಮಾಹಿತಿ ಬೇಕೆಂದರೆ ಈ ಕೆಳಗಿನವುಗಳ ಮೇಲೆ ಒಮ್ಮೆ ಕಣ್ಣಾಡಿಸಿ. ಹುಟ್ಟಿದ್ದು ಅಮ್ಮನೂರು ಹಾಸನ ಜಿಲ್ಲೆಯ ಆರಕಲಗೂಡಿನ ಬಬಗಳಲೆ ಗ್ರಾಮ. ಬೆಳೆದಿದ್ದು ಪೂರ್ತಿ ಈಗಿನ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಲೊಕ್ಕನಹಳ್ಳಿ. ಓದಿದ್ದು ಸರಕಾರಿ ಶಾಲೆ. ಹತ್ತರ ನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ನಗರಕ್ಕೆ ವಲಸೆ. ಮತ್ತೆ ತಿರುಗಿ ನೋಡಲಾಗಿಲ್ಲ. ಈಗ ಸದ್ಯಕ್ಕೆ ನನ್ನ ಇಂಜಿನಿಯರಿಂಗ್ ಪದವಿ ನೋಡಿ ಬಹುರಾಷ್ಟ್ರೀಯ ಕಂಪನಿಯೊಂದು ಕೆಲಸ ಕೊಟ್ಟಿದೆ. ಪ್ರೀತಿಸಿದವಳೊಟ್ಟಿಗೆ ಮದುವೆಯಾಗಿ ಸದ್ಯ ಮುದ್ದು ಬಂಗಾರಿಯೊಬ್ಬಳಿಗೆ ನಾನು ಪ್ರೀತಿಯ ತಂದೆಯಾಗಿದ್ದೇನೆ:)

ನನ್ನ ಹವ್ಯಾಸ: ಸಂಗೀತ, ಚಲನಚಿತ್ರ, ಮಿಮಿಕ್ರೀ, ಹಾಡುವುದು, ಪ್ರವಾಸ ಹಾಗೂ ಸಾಹಿತ್ಯ.

ಭೈರಪ್ಪ, ತೇಜಸ್ವಿ, ಕಾರಂತ, ದಿನಕರ ದೇಸಾಯಿ ಮುಂತಾದ ಕವಿಗಳ ಸಾಹಿತ್ಯದಲ್ಲಿ ಕಣ್ಣಾಡಿಸಿದ್ದೇನೆ, ಭಾರತೀಯ ಲೇಖಕ ಚೇತನ್ ಭಗತ್ ರವರ ಆಂಗ್ಲ ಸಾಹಿತ್ಯವನ್ನೂ ಓದಿದ್ದೇನೆ. ರವಿ ಬೆಳಗೆರೆಯವರ ಬರೆಯುವ ಶೈಲಿ ನನಗಿಷ್ಟ. ಸಾಹಿತ್ಯವೆಂಬುದು ಸಾಧ್ಯವಾದಷ್ಟು ಜನಗಳ ಮುಟ್ಟುವಂತಿರಬೇಕು ಎಂಬುದು ನನ್ನ ಅಭಿಪ್ರಾಯ. ಅದಕ್ಕಾಗಿಯೇ ಸರಳ ಭಾಷೆಯ, ಆದರೆ ಪರಿಣಾಮಕಾರಿ ಶಕ್ತಿಯುಳ್ಳ ಸಾಹಿತ್ಯವನ್ನು ಹೆಚ್ಚು ಇಷ್ಟಪಡುತ್ತೇನೆ. ಜೊತೆಗೆ ಬರೆಯುವಾಗಲೂ ಸರಳ ಭಾಷೆಯಲ್ಲೇ ಬರೆಯಲು ಪ್ರಯತ್ನ ಮಾಡುತ್ತೇನೆ. ಕನ್ನಡದ ಮೇಲಿನ ಪ್ರೀತಿ ನನ್ನನ್ನು ಬರೆಯಲು ಶುರು ಮಾಡಿದೆ.

ಮೈಸೂರಿನಲ್ಲಿ ಪ್ರಥಮ ವರ್ಷದ ಪಿಯುಸಿಯಲ್ಲಿ ನಾ ಓದುತ್ತಿದ್ದಾಗ ಹಾಗೆ ಸುಮ್ಮನೆ ಕುಳಿತಿರಲಾರದೇ (ಜೀವನದ ಪ್ರಪ್ರಥಮ) ಒಂದು ಚುಟುಕ ಬರೆದೆ.

ನಾನಂದುಕೊಂಡಂತೆಯೇ,
ಅಂದು,
ನನ್ನ ಪ್ರಿಯೆ,
ಪ್ರೇಮಪತ್ರವ ಕೊಟ್ಟಳು
ನನಗೊಂದು..!!
ಅಗ್ರಹಾರದಲ್ಲಿಯ,
ಆಕೆಯ,
ಪ್ರಿಯಕರನಿಗೆ,
ಕೊಟ್ಟು ಬರಲೆಂದು!!  

ಈ ಚುಟುಕ ನೋಡಿ ನಕ್ಕು, ಅಂದು ನನ್ನ ಗೆಳೆಯರು ಕೊಟ್ಟ ಷಹಬ್ಬಾಷ್ ಗಿರಿ ಎಷ್ಟೊಂದು ಉತ್ಸಾಹ ಕೊಟ್ಟಿತೆಂದರೆ, ಕೇವಲ ಒಂದಷ್ಟು ತಿಂಗಳುಗಳಲ್ಲೇ ಡೈರಿಯೊಂದರಲ್ಲಿ ಸುಮಾರು ಮುನ್ನೂರು ಕವನಗಳನ್ನು ಬರೆದೆ! ಮತ್ತೆ ವಿದ್ಯಾಭ್ಯಾಸದ ಗುಂಗಿನಲ್ಲಿ ನನ್ನ ಈ ಹವ್ಯಾಸವನ್ನು ಪಕ್ಕಕ್ಕಿರಿಸಬೇಕಾಯಿತು.ಈಗ ಮತ್ತೊಮ್ಮೆ ಬರೋಬ್ಬರಿ ಹನ್ನೆರಡು ವರ್ಷಗಳ ನಂತರ, ಅರಿವಿಲ್ಲದೇ ಆರಂಭಿಸಿದ ನನ್ನದೇ ಬ್ಲಾಗಿನ ಮುಖಾಂತರ ಮತ್ತೊಮ್ಮೆ ಸಾಹಿತ್ಯ ಪಯಣ ಶುರುವಾಗಿದೆ. ಫೇಸ್ ಬುಕ್ ನ "ಕನ್ನಡ ಬ್ಲಾಗ್" ಗೆಳೆಯರ ಒಡನಾಟದೊಂದಿಗೆ ಮತ್ತೊಮ್ಮೆ ಕಳೆದು ಹೋದ ಅಮೂಲ್ಯ ವಸ್ತು ಮತ್ತೊಮ್ಮೆ ಸಿಕ್ಕಂತಾಗಿದೆ. ಸಾಹಿತ್ಯಕ್ಕೆ ಹೆಚ್ಚು ಸಮಯ ಮೀಸಲಿಡಲಾಗದಿದ್ದರೂ ಸಮಯ ಸಿಕ್ಕಾಗಲೆಲ್ಲ ಹೊಸ ಪುಸ್ತಕಗಳ ಮೊರೆ ಹೋಗುತ್ತೇನೆ. ಓದುವ ಅಥವಾ ಬರೆಯುವ ಸಾಹಿತ್ಯದಲ್ಲಿ ನನ್ನನ್ನು ಬಹಳ ಕಾಡುವ ವಿಷಯಗಳೆಂದರೆ ಹಸಿವು,ಸಾವು,ಸಂಬಂಧ ಹಾಗೂ ಜೀವನ. ನಾ ಏನೇ ಬರೆದರೂ ಅವುಗಳು ನನ್ನ ಮನಸ್ಸಿನಲ್ಲಿ ಸ್ವಲ್ಪ ಸಮಯ ಬೀಡು ಬಿಡಲು ಅವಕಾಶ ಮಾಡಿ, ಕೊಂಚ ಗಿರಕಿ ಹೊಡೆಯಬಿಟ್ಟು ನಂತರವೇ ಹಾಳೆಗೆ ಗೀಚುತ್ತೇನೆ.

ಹೀಗೆಯೇ ಇನ್ನೊಂದಷ್ಟು ಬರೆಯುವ ಶಕ್ತಿ ತಾಯಿ ಕನ್ನಡಾಂಬೆ ಕೊಡಲಿ.

ಅರಿಯದಿಹ ಅಂತ್ಯದತನಕ
ಹುಟ್ಟಿನಿಂದ ಪರಿಪೂರ್ಣತೆಯೆಡೆಗೆ
ನಡೆಯುತಿಹ ಪಯಣವೇ ಜೀವನ

ಕನ್ನಡ ಬ್ಲಾಗ್ ಅತ್ಯಂತ ಆರೋಗ್ಯಕಾರಿ ಕನ್ನಡ ಸಾಹಿತ್ಯ ತಾಣ. ಇಲ್ಲಿ ಪ್ರತೀ ಕನ್ನಡ ಸಾಹಿತ್ಯಪ್ರಿಯರಿಗೆ ತುಂಬು ಹೃದಯದ ಸ್ವಾಗತ ಸಿಗುತ್ತದೆ. ಪ್ರತೀ ಸದಸ್ಯರು ಮುಕ್ತ ಮನಸ್ಸಿನಿಂದ ತಮ್ಮ ಸಾಹಿತ್ಯವನ್ನು ಪ್ರಕಟಿಸುವುದಾಗಲಿ ಮತ್ತು ಇನ್ನೊಬ್ಬರ ಸಾಹಿತ್ಯಕ್ಕೆ ಪ್ರೋತ್ಸಾಹ ನೀಡುವುದಾಗಲಿ ಮಾಡುತ್ತಾರೆ. ಈಗಾಗಲೇ ತನ್ನ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಿಕೊಂಡಿರುವ ಕಬ್ಲಾ, ಮುಂದಿನ ದಿನಗಳಲ್ಲಿ ಅಂತರ್ಜಾಲದಲ್ಲಿಯ ಎಲ್ಲ ಕನ್ನಡಿಗರನ್ನು ಸೆಳೆಯುತ್ತದೆ ಅನ್ನುವುದು ನನ್ನ ಆಶಯ:) --ಸಂತು"

ಎಂದು ಮಾತು ಮುಗಿಸಿದ ಗೆಳೆಯ ಸಂತುವಿನ ಚಂದದ ಮಾತುಕತೆ ನಿಮಗೆ ಇಷ್ಟವಾಗಿದೆ ಎಂದುಕೊಳ್ಳುವೆ ಗೆಳೆಯರೇ.. ಸಂತೋಷ್ ಅವರ ಬ್ಲಾಗಿನ ಲಿಂಕ್ ಈ ಕೆಳಗಿನಂತಿದೆ.. ಪೋಸ್ಟ್ ಗಳು ಕಡಿಮೆ ಇವೆ ಎನಿಸಿದರೂ ಸಮಯವಿದ್ದಾಗ ಒಮ್ಮೆ ಕಣ್ಣಾಡಿಸಿ..

http://frommyheartsanthu.blogspot.in/
ಅವರ ಇಂಗ್ಲೀಷ್ ಬ್ಲಾಗ್ ಸಹ ಇದೆ ನೀವಲ್ಲಿ ಅವರಿರುವ ದೇಶದ ಫೋಟೋಗಳನ್ನು ನೋಡಬಹುದು :))
http://santhu-world.blogspot.in/

ಗೆಳೆಯರೇ, ಗೆಳೆಯ ಸಂತುವಿನ ಕವಿತೆಗಳ ಕೆಲವು ಆಯ್ದ ಸಾಲುಗಳು ನಿಮಗಾಗಿ..

ನುಡಿವ ನಾಲಗೆಯ ನಡೆಯ ಮೇಲೇಕೋ ನನಗನುಮಾನ. 
ಟೊಳ್ಳು ಪೊಳ್ಳು ಸುಳ್ಳು ನುಡಿದು,
ನನ್ನ ಕಳ್ಳನನ್ನಾಗಿಸುವ,
ನಾಲಗೆಯ ಮೇಲೆ ನನಗನುಮಾನ.
*****
ಇನ್ನೂ ನೆನಪಿದೆ ಅಮ್ಮ,
ನಿನ್ನುದರ ಸೀಳಿ ನಾ ಹೊರಬಂದಾಗ,
ಸಿಕ್ಕ ಮರುಹುಟ್ಟಿನಲೂ,
ನನ್ನ ನೋಡುವ ನಿನ್ನ ಕಾತರ.
*****
ಮತ್ತೆ ಸಿಗೋಣ

ಪ್ರೀತಿಯಿಂದ
ನಟರಾಜು :))

ಶುಕ್ರವಾರ, ಸೆಪ್ಟೆಂಬರ್ 7, 2012

ಎಲೆ ಮರೆ ಕಾಯಿ ೫೫

ಕುಂತಿಯ ಮನದಿ
ಮೂಡಿತು ಪ್ರಶ್ನೆ,
ಮುನಿಯ ಮಂತ್ರದ
ಸತ್ವಪರೀಕ್ಷೆ,
ಗಂಗಜಳದಿ; ಸ್ನಾನವ ಮಾಡೇ,
ಸೂರ್ಯನ ಮಂತ್ರವ ಜಪಿಸಿದೂಡೆ,
ಫಲಿಸಿತು ಮಗುವಿನ ರೂಪದಲಿ

ನಾವೆಲ್ಲಾ ಪೂರ್ತಿಯಾಗಿ ರಾಮಾಯಣ ಮಹಾಭಾರತ ಕೃತಿಗಳ ಓದಿಲ್ಲದಿದ್ದರೂ ಆ ಕೃತಿಗಳಲ್ಲಿನ ಕಥೆಗಳ ಕೇಳಿದ್ದೇವೆ, ಒಂದು ಕಾಲದಲ್ಲಿ ನಮ್ಮೂರುಗಳಲ್ಲಿ ನಡೆಯುತ್ತಿದ್ದ ನಾಟಕಗಳ ಡ್ರಾಮಾ ಸೀನರಿಗಳ ಬ್ಯಾಕ್ ಗ್ರೌಂಡ್ ನಲ್ಲಿ, ಟೀವಿಯ ಪರದೆಗಳಲ್ಲಿ ಬರುತ್ತಿದ್ದ ಹಿಂದಿ ಧಾರಾವಾಹಿಗಳಲ್ಲಿ ಆ ಪಾತ್ರಗಳನ್ನು ಬೆರಗುಗಣ್ಣುಗಳಿಂದ ನೋಡಿ ಆನಂದಿಸಿದ್ದೇವೆ. ಅಚ್ಚರಿಪಟ್ಟಿದ್ದೇವೆ ಸಹ. ಅವತ್ತಿನ ದಿನಗಳಲ್ಲಿ ನಮ್ಮ ಕಣ್ಣಿಗೆ ಕಾಣುತ್ತಿದ್ದ ಆ ಅಧ್ಬುತ ಪಾತ್ರಗಳನು ಇಂದಿನ ನಾಟಕ ಧಾರಾವಾಹಿಗಳಲ್ಲಿ ಹುಡುಕಿದರೂ ಸಿಗವು. ಖುಷಿಪಡುವ ಸಂಗತಿ ಎಂದರೆ ಇಂದಿನ ಮಕ್ಕಳಿಗೆ ಆ ಮಹಾಕಾವ್ಯಗಳ ಕೆಲವು ಪಾತ್ರಗಳ ಅವತಾರಗಳು ಕೆಲವು ಟೀವಿಗಳಲ್ಲಿ ಕಡೇ ಪಕ್ಷ ಕಾರ್ಟೂನ್ ಕ್ಯಾರೆಕ್ಟರ್ ಗಳಲ್ಲಾದರು ಜೀವಂತವಾಗಿವೆ. ಆ ಪಾತ್ರಗಳು ಹೀಗೆ ನಮ್ಮ ಮನಃಪಟಲದಲ್ಲಿ ಇನ್ನೂ ಜೀವಂತವಾಗಿವೆ ಎಂದರೆ ಆ ಮಹಾಕಾವ್ಯಗಳಲ್ಲಿ ಏನೋ ಒಂದು ವಿಶೇಷತೆ ಇದೆ ಮತ್ತು ಅವುಗಳಲ್ಲಿ ನಮಗೆ ಕಂಡೂ ಕಾಣದಂತಿರುವ ಎಷ್ಟೋ ಜೀವನದ ರಹಸ್ಯಗಳು ಅಡಕವಾಗಿವೆ ಎನಿಸುತ್ತೆ. ಅದಕ್ಕೆ ಆ ಮಹಾಕಾವ್ಯಗಳಿಗೆ ಮತ್ತು ಅವುಗಳಲ್ಲಿ ಬರುವ ಕೆಲವು ಪಾತ್ರಗಳಿಗೆ ನಮ್ಮಲ್ಲಿ ಪೂಜ್ಯನೀಯ ಭಾವವಿದೆ. ನಮ್ಮ ದೇಶದ ಸಂಸ್ಕೃತಿಯ ಪ್ರತೀಕದಂತಿರುವ ಅಂತಹ ಮಹಾಕಾವ್ಯಗಳಲ್ಲಿನ ಪಾತ್ರಗಳ ತೆಗೆದುಕೊಂಡು ತಮ್ಮ ಬ್ಲಾಗುಗಳಲ್ಲಿ ಕವಿತೆಗಳ ಬರೆಯುವವರು ತುಂಬಾ ತುಂಬಾ ವಿರಳ. ಅಂತಹ ವಿರಳವಾಗಿ ಸಿಗುವ ಕವಿತೆಗಳಲ್ಲಿ ಕರ್ಣನ ಕುರಿತ ಮೇಲಿನ ಕವಿತೆಯ ಸಾಲು ಇತ್ತೀಚೆಗೆ ಓದಿಗೆ ಸಿಕ್ಕಿದ್ದು ಮಧುರ ಭಾವ ಎಂಬ ಬ್ಲಾಗಿನಲಿ.

ಮುದುರಿಕೊಂಡು ಚಾಪೆ ಮೇಲೆ ಮಲಗಿಕೊಂಡಿರುವ 
ಸಾವಿರ ಕನಸುಗಳೊಂದಿಗೆ, ಕಮರಿದ ಬದುಕ ಹಿಡಿದು
ಆಳದ ಮನಸಲ್ಲಿ ಉಳಿದ ದೀಪದ ಪ್ರಜ್ವಲತೆಯಲ್ಲಿ
ಮುನಿದ ಕತ್ತಲೆಗೆ ಶರಣು ಹೋದ ನಿನ್ನ ಏನನ್ನಬೇಕು 

ಕವಿಗಳೆಂದರೆ ನಮಗೆ ಒಂದು ಗೌರವ ಭಾವನೆ ಹುಟ್ಟುವುದು ಕವಿಗಳು ತಮ್ಮ ಭಾವನೆಗಳಿಗೆ ಅಕ್ಷರದ ರೂಪಕೊಡುವ ಮೋಡಿಗೆ ಅನಿಸುತ್ತೆ. ಒಬ್ಬ ಸಾಮಾನ್ಯ ಮನುಷ್ಯನಲ್ಲಿ ಹುಟ್ಟದ ಅಂತಹ ಭಾವನೆಗಳು ಕವಿಗಳಲ್ಲಿ ಹೇಗೆ ಹುಟ್ಟುವುದೋ ದೇವರೇ ಬಲ್ಲ. ನಾವು ಒಬ್ಬರೊಡನೆ ಮಾತಿಗೆ ಕುಳಿತರೆ ನಮ್ಮೊಳಗಿನ ಪದಗಳೇ ಖಾಲಿಯಾದಂತೆ ಅನಿಸಿಬಿಡುತ್ತದೆ. ಆದರೆ ಕೆಲವು ಕವಿಗಳಲ್ಲಿ ಭಾವನೆಗಳು ಕವಿತೆಗಳ ರೂಪ ಪಡೆದಷ್ಟು ಮತ್ತಷ್ಟು ಕವಿತೆಗಳು ಇನ್ಯಾವುದೋ ಭಾವದಲ್ಲಿ ಅವರೊಳಗೆ ಹುಟ್ಟುತ್ತಲೇ ಇರುತ್ತವೆ. ಅದಕ್ಕೆ ಹೇಳೋದು ಕವಿ ಯಾರೇ ಆಗಿದ್ದರೂ ಅವನೊಳಗಿನ ಕವಿಗೆ ನಾವು ನಮಿಸಲೇ ಬೇಕು. ಒಮ್ಮೆ ಇವರ ಕವಿತೆಗಳ ಓದಿದರೆ ನಮ್ಮನ್ನು ಒಂದು ಭಾವನಾ ಪ್ರಪಂಚದಲ್ಲೇ ಗಿರಕಿ ಹೊಡೆಯುವಂತೆ ಮಾಡುವೆ ಈ ಕವಯತ್ರಿಗೆ ಒಂದು ನಮನ..

"ಪ್ರೀತಿಯ ಮಾತುಗಳಿಗೆ ಮನಸೋಲದವರು ಯಾರು? ನಾನು ಕೆಲವು ಸಂಬಂಧಗಳನ್ನು ಗೌರವಿಸುತ್ತೇನೆ.. ಆರಾಧಿಸುತ್ತೇನೆ.. ಪ್ರೀತಿಸುತ್ತೇನೆ... ಸೋಲುತ್ತೇನೆ.. ನನಗೆ ತುಂಬಾ ಇಷ್ಟ ಎಂದರೆ ನನ್ನ ಅಮ್ಮ. ಅವಳೆಂದರೆ ನನ್ನ ಜೀವಕಿಂತ ಮಿಗಿಲು, ಹಾಗೆ ನನಗೆ ನೋವಾದಾಗ, ಆ ನೋವಿನ ಸ್ಪರ್ಶ ಯಾರಿಗೂ ಸೋಕಬಾರದು, ಕಣ್ಣೀರು ತಡವರಿಸದೆ ಬಂದಾಗ ಆ ನೀರ ಅಲೆಗಳು ಬಂದು ಯಾರಿಗೂ ಗೋಚರಿಸದೆ ಎಲ್ಲವನ್ನು ತನ್ನ ಮಡಿಲಿನಲ್ಲಿ ಅಡಗಿಸಿಕೊಳ್ಳಲಿ, ಎಂಬ ಆಶಯ.. ಹಾಗೆಯೇ ನನಗೆ ಬಲುಬೇಗ ಕೋಪ ಬರುತ್ತದೆ, ಆದರೆ ಕಾರಣವಿಲ್ಲದೆ ಯಾರ ಮನಸ್ಸಿಗೂ ನೋವನ್ನುಂಟು ಮಾಡಲಾರೆ, ನನಗೆ ವಿಪರೀತ ಕನಸುಗಳು.. ಆ ಕನಸುಗಳ ಸರಮಾಲೆಯಲ್ಲಿ ಯಾವುದೊಂದು ನನ್ನ ಬೆನ್ನು ಹತ್ತಿ ಕರೆಯುವುದೋ ಎಂಬ ಆಸೆ ಕಂಗಳಿಂದ ಇದಿರು ನೋಡುತ್ತಿದ್ದೇನೆ..."

ಹೀಗೆ ಭಾವನಾತ್ಮಕವಾಗಿ ಬರೆಯುತ್ತಲೇ ನಮಗೆ ಹೆಚ್ಚಾಗಿ ಭಾವ ತುಂಬಿದ ಕವಿತೆಗಳನ್ನು ಕಟ್ಟಿಕೊಟ್ಟಿರುವ ಈ ಸಹೋದರಿ ನಮ್ಮ ಇಂದಿನ ಎಲೆ ಮರೆ ಕಾಯಿಗಳ ಜೊತೆ ಮಾತುಕತೆಯ ಅತಿಥಿ. ಅಂದ ಹಾಗೆ ಈ ಭಾವ ಜೀವಿ ಯಾರು ಎಂಬ ಕುತೂಹಲ ನಿಮಗಿರಬಹುದು. ಅವರ ಹೆಸರು ಮಾಲಿನಿ ಭಟ್.. ಸಹೋದರಿ ಮಾಲಿನಿ ಯವರೊಡನೆ ನಡೆಸಿದ ಮಾತುಕತೆಯ ತುಣುಕುಗಳು ಸಹೃದಯಿಗಳೇ ಇಗೋ ನಿಮಗಾಗಿ...

 ಮಾಲಿನಿ ಭಟ್

"ನನ್ನ ಬಗ್ಗೆ ಹೇಳಬೇಕೆಂದರೆ ನಮ್ಮದು ಕರಾವಳಿಯ ಪ್ರದೇಶವಾದ ಭಟ್ಕಳದ ಶಿರಾಲಿ ಗ್ರಾಮ. ನಮ್ಮೂರು ತುಂಬಾ ಸುಂದರವಾದ ಪ್ರಕೃತಿಯ ಸೊಬಗಿನಿಂದ ತುಳುಕುತ್ತಿದೆ. ನಾನು ಬಾಲ್ಯದಿಂದಲೂ ತುಂಬಾ ಚೂಟಿ ಹುಡುಗಿ ಎಂದು ನಮ್ಮ ಶಿಕ್ಷಕರು ಇಂದಿಗೂ ಹೇಳುವಾಗ ನನ್ನ ಬಾಲ್ಯವನ್ನು ನಾ ಮರಳಿ ಪಡೆಯ ಬೇಕೆಂಬ ಹಂಬಲ ನನ್ನನ್ನು ಅತಿಯಾಗಿ ಕಾಡುತ್ತದೆ. ಹಾಗೆಯೇ ಬಾಲ್ಯದಲ್ಲಿ ನನ್ನ ತಂದೆಯನ್ನು ಕಳೆದುಕೊಂಡ ಕೊರಗು ನನ್ನ ಮನಸಿನಲ್ಲಿ ಘಾಸಿಯಾಗೆ ಉಳಿದಿದೆ. ನನ್ನ ಕನಸುಗಳು ತುಂಬಾ ಇದ್ದರೂ ಯಾವ ಕನಸು ನನಸು ಮಾಡಿಕೊಳ್ಳಲಾಗದೆ ಹತಾಶೆಯ ಹೊಂದಿದಾಗ, ನನ್ನ ಮನಸಿನ ಭಾವನೆಗಳನ್ನು ಅಕ್ಷರ ರೂಪದಲ್ಲಿ ಬರೆಯತೊಡಗಿದೆ. ನಾನು ನನ್ನ ಮೊದಲ ಕವನ ನಾ ಹೈಸ್ಕೂಲ್ ಬಿಟ್ಟಿದ್ದ ಸಂಧರ್ಭದಲ್ಲಿ ನಮ್ಮ ಶಿಕ್ಷರನ್ನು ಮನಸಿನಲ್ಲಿ ಇಟ್ಟುಕೊಂಡು, "ನನ್ನ ಭಾವನೆಗಳಿಗೆ " ಎಂಬ ಕವನ ಬರೆದೆ.

ನಂತರ ಕಾಲೇಜು ಶಿಕ್ಷಣ ಹೇಳುವಷ್ಟು ಮಧುರವಾಗಿರಲಿಲ್ಲ, ಹೇಗೋ ತಿಳಿಯದು ಕಾಲೇಜು ಶಿಕ್ಷಣ ಮುಗಿದೇ ಹೋಯಿತು.. ೨ ವರ್ಷ ಏನನ್ನು ಬರೆಯದೆ ಕಳೆದೆ... ನಂತರ ೪ ಕಾದಂಬರಿಗಳನ್ನು ಬರೆದೆ, ಹಾಗೆಯೇ ಕವನ. ಇವೆಲ್ಲದರ ಮಧ್ಯೆ ಬರವಣೆಗೆ ನನ್ನ ಉಸಿರಾಗಿ ಹೋಯಿತು, .ಬರವಣಿಗೆಯನ್ನು ಉತ್ತಮವಾಗಿ ಮೈಗೂಡಿಸಿಕೊಂಡು ಒಳ್ಳೆಯ ಕೃತಿಗಳನ್ನು ಕೊಡಬೇಕೆಂಬುದು ನನ್ನ ಮನದಾಳದ ಆಸೆ.. ಅದಕ್ಕೆ ನಿರಂತರ ಪರಿಶ್ರಮ ಪಡುವೆ.

ನನ್ನ ವೃತ್ತಿ ಓದಿದ್ದು M.A.Economics, ಈಗ ಪ್ರಾಥಮಿಕ ಶಾಲೆಯಲ್ಲಿ ಅರೆಕಾಲಿಕ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ.

ಮೊದಲು ಫೇಸ್ ಬುಕ್ ಓಪನ್ ಮಾಡಿದಾಗ, ಇದರಲ್ಲಿ ನನ್ನ ಪ್ರತಿಭೆಗೆ ಒಳ್ಳೆ ಅವಕಾಶ ಸಿಗಬಹುದೆಂದು ತುಂಬಾ ಸಂತೋಷವಾಯಿತು, ಹಾಗೆಯೇ ನನ್ನನ್ನು ಪ್ರೋತ್ಸಾಹಿಸಿದವರು ಹಲವಾರು ಮಂದಿ. ಕನ್ನಡಕ್ಕಾಗಿ ಹಲವಾರು ಗ್ರೂಪ್ ಗಳು ಪರಿಶ್ರಮಿಸುತ್ತಿವೆ, ಅದರಿಂದ ಹಲವಾರು ಪ್ರತಿಭೆಗೆ ಅವಕಾಶ ಸಿಗುವಂತಾಗಿದೆ. ಎಲ್ಲಾರಿಗೂ ನನ್ನ ವಂದನೆಗಳು ..."

ಎಂದು ಮಾತು ಮುಗಿಸಿದ ಸಹೋದರಿ ಮಾಲಿನಿಯವರ ಮಾತುಗಳು ನಿಮಗೆ ಇಷ್ಟವಾಯಿತು ಎಂದುಕೊಳ್ಳುವೆ ಸಹೃದಯಿಗಳೇ.. ಅವರ ಬ್ಲಾಗಿನ ಕೊಂಡಿ ಈ ಕೆಳಗೆ ನೀಡಿರುವೆ.. ಸಮಯವಿದ್ದಾಗ ಅವರ ಬ್ಲಾಗಿನ ಮೇಲೊಮ್ಮೆ ಒಮ್ಮೆ ಕಣ್ಣಾಡಿಸಿ ನಿಮಗೆ ಅವರ ಕವಿತೆಗಳು ಖಂಡಿತಾ ಇಷ್ಟವಾಗಬಹುದು..

www.madhurabava.blogspot.com

ಸಹೋದರಿ ಮಾಲಿನಿಯವರ ಒಂದೆರಡು ಕವಿತೆಯ ಸಾಲುಗಳನು ನಿಮಗಾಗಿ ನೀಡಿರುವೆ.. ಖುಷಿಯಿಂದ ಓದಿಕೊಳ್ಳಿ..

ನನ್ನ ಕಣ್ಣುಗಳ ಕಟ್ಟೆಯಲ್ಲಿ
ತುಂಬು ನೀರಿನ ಹರಿವಿದೆ
ರಭಸದಿ ಸೋಕಿದ ಗಾಳಿಯಲ್ಲಿ
ನೆನಪಿನ ರಸವು ಜಾರುವುದೆಂಬ ಭಯ 
****
ಮನಸ ತುಮುಲ ಎಲ್ಲ ಅಕ್ಷರವಾಗದು
ಹೇಳುವೆನೆಂದರೂ ಎಲ್ಲ ಹೇಳಲಾಗದು
ಅರಿಯದಂತೆ ಮೌನವಾಗುವುದು
ಉತ್ತರ ಹೇಳದೆ ನೀ ಸರಿದ ರೀತಿ ..
*****

ಮತ್ತೆ ಸಿಗೋಣ

ಪ್ರೀತಿಯಿಂದ
ನಟರಾಜು :))